ಹುಬ್ಬಳ್ಳಿ: ಇಷ್ಟು ದಿನ ಧಾರವಾಡದ ಗರಗದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್(ಬಿಐಎಸ್) ಮಾನ್ಯತೆ ಪಡೆದ ರಾಷ್ಟ್ರಧ್ವಜವನ್ನ ಹುಬ್ಬಳ್ಳಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಿಸಲಾಗುತ್ತಿದೆ.
ನಮ್ಮ ರಾಷ್ಟ್ರಧ್ವಜ ತಯಾರಾಗೋದು ಮಹಿಳೆಯರ ಕೈಯಲ್ಲಿ. 50ಕ್ಕೂ ಹೆಚ್ಚು ಮಹಿಳೆಯರು ವರ್ಷಪೂರ್ತಿ ಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
1957ರಲ್ಲಿ ಸಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಸ್ಥಾಪಿಸಿದ ಈ ಖಾದಿ ಕೇಂದ್ರ ಈಗ ದೇಶದ ಹೆಮ್ಮೆಯ ರಾಷ್ಟ್ರಧ್ವಜ ತಯಾರಿಸೋ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ತಯಾರಾಗೋ ಗುಣಮಟ್ಟದ ಖಾದಿ ಬಟ್ಟೆ ನೋಡಿ 2006 ಮತ್ತು 2007ರಲ್ಲಿ ಕೇಂದ್ರ ಸರ್ಕಾರ ಬಿಐಎಸ್ ಮಾನ್ಯತೆ ನೀಡಿದೆ.
ಧ್ವಜ ಹೇಗೆ ತಯಾರಾಗುತ್ತೆ?: ಮೊದಲು ಸ್ಥಳೀಯವಾಗಿ ಬೆಳೆಯುವ ಜೈದರ್ ಮತ್ತು ಎಲ್ಎಲ್ಆರ್ ತಳಿಯ ಹತ್ತಿಯನ್ನೇ ಬಳಸಲಾಗುತ್ತದೆ. ಈ ಹತ್ತಿಯಿಂದ ತೆಗೆದ 42 ಎಳೆ ಮಾಡಿದ ದಾರದಿಂದ ರಾಷ್ಟ್ರ ಧ್ವಜದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಒಂದು ಅಡಿ ದಾರ 28 ಗ್ರಾಂ ನಿಂದ 29 ಗ್ರಾಂ ಮೀರಬಾರದು. ಒಂದು ಸೆಂಟಿ ಮೀಟರ್ ಬಟ್ಟೆ 42 ದಾರದ ಎಳೆಗಳನ್ನು ಮಾತ್ರ ಹೊಂದಿರಬೇಕು. 1 ಮೀಟರ್ ಬಟ್ಟೆ 205 ಗ್ರಾಂ ತೂಕ ಮಾತ್ರ ಹೊಂದಿರಬೇಕು. ಇಷ್ಟೆಲ್ಲಾ ನಿಯಾಮಾವಳಿಗಳನ್ನು ಪಾಲಿಸಿ ನಮ್ಮ ರಾಷ್ಟ್ರ ಧ್ವಜವನ್ನು ತಯಾರಿಸಲಾಗುತ್ತದೆ.
1984 ರಿಂದಲೂ ಧಾರವಾಡ ತಾಲೂಕಿನ ಗರಗದಲ್ಲಿ ಧ್ವಜವನ್ನು ತಯಾರು ಮಾಡಲಾಗುತಿತ್ತು. ಈಗ ಕೇವಲ ಧ್ವಜಕ್ಕೆ ಬೇಕಾಗುವ ಬಟ್ಟೆಯನ್ನು ತಯಾರಿಸಲು ಮಾತ್ರ ಮಾನ್ಯತೆ ನೀಡಿದ್ದು, ಬೆಂಗೇರಿಯಲ್ಲೇ 9 ಬಗೆಯ ಧ್ವಜಗಳನ್ನು ತಯಾರು ಮಾಡಲಾಗುತ್ತಿದೆ. ಹೀಗೆ ಇಲ್ಲಿ ತಯಾರಾದ ರಾಷ್ಟ್ರ ಧ್ವಜ ದೇಶದೆಲ್ಲೆಡೆ ಗರ್ವದಿಂದ ಹಾರಾಡುತ್ತದೆ. ಎಲ್ಲಾ ವಿಧಾನಸಭೆ, ಸರ್ಕಾರಿ ಕಚೇರಿಗಳು ಸೇರಿದಂತೆ ವಿದೇಶಿ ರಾಯಭಾರಿ ಕಚೇರಿಗಳಲ್ಲೂ ಹಾರಾಡುತ್ತೆ ಅನ್ನೋದೇ ಹೆಮ್ಮೆಯ ವಿಚಾರವಾಗಿದೆ.