ನವದೆಹಲಿ: 16 ವರ್ಷದ ಹುಡುಗಿಯನ್ನು ಚುಚ್ಚಿ ಚುಚ್ಚಿ ಕೊಂದಿದ್ದಲ್ಲದೇ ತಲೆ ಮೇಲೆ ಕಲ್ಲು ಎತ್ತಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ಎಂಬುದನ್ನು ಪೊಲೀಸರು ರಿವೀಲ್ ಮಾಡಿದ್ದಾರೆ.
ಎರಡೆರಡು ಬಸ್ ಬದಲಾಯಿಸಿಕೊಂಡು ಹೋಗಿರುವ ಸಾಹಿಲ್ (Sahil), ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ನಂತರ ಉತ್ತರಪ್ರದೇಶದಲ್ಲಿರುವ ತನ್ನ ಆಂಟಿ ಮನೆಗೆ ತಲುಪಿದ ಬಳಿಕ ಸ್ವಿಚ್ಛ್ ಆನ್ ಮಾಡಿ ತಂದೆಗೆ ಕರೆ ಮಾಡಿದ್ದಾನೆ. ಈ ಕರೆಯ ಸುಳಿವಿನ ಮೇರೆಗೆ ಪೊಲೀಸರು ಆರೋಪಿ ಪತ್ತೆಗೆ ಇಳಿದಿದ್ದಾರೆ. ಮೋಬೈಲ್ ನ ತಾಂತ್ರಿಕ ಜಾಡು ಹಿಡಿದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಡೆದಿದ್ದೇನು..?: ದೆಹಲಿಯ ಶಹಬಾದ್ ಡೈರಿ ಪ್ರದೇಶದ ಜೆ.ಜೆ. ಕಾಲೊನಿಯ ಹುಡುಗಿ ಸಾಕ್ಷಿ ಹಾಗೂ ಸಾಹಿಲ್ ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮಧ್ಯೆ ವೈಮನಸ್ಸು ಉಂಟಾದ ಹಿನ್ನೆಲೆ ಭಾನುವಾರ ಸಂಜೆ ರೋಹಿಣಿಯ ಶಹಬಾದ್ ಡೈರಿ (Shahbad Dairy Murder) ಪ್ರದೇಶದಲ್ಲಿ ಸಾಹಿಲ್, ಸಾಕ್ಷಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೇ ಕಲ್ಲಿನಿಂದ ಜಜ್ಜಿ ಆಕೆಯನ್ನು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಸಾಹಿಲ್ಗೆ ಬೆದರಿಕೆ ಹಾಕಿದ್ದೇ ಅಪ್ರಾಪ್ತೆಯ ಕೊಲೆಗೆ ಕಾರಣವಾಯ್ತಾ..?
ಸಾಕ್ಷಿ ತನ್ನ ಸ್ನೇಹಿತೆಯ ಮಗನ ಬರ್ತ್ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭ ಸಾಹಿಲ್ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಶಹಬಾದ್ ಡೈರಿಯ ಕಿರಿದಾದ ಲೇನ್ನಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯವನ್ನು ದಾರಿಹೋಕರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.