ಜೈಪುರ್: ‘ಧೋಲೇರಾ ಸ್ಮಾರ್ಟ್ ಸಿಟಿ’ (Dholera Smart) ಹೆಸರಿನಲ್ಲಿ 70,000 ಜನರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 2,676 ಕೋಟಿ ರೂ. ವಂಚಿಸಿದ ರಾಜಸ್ಥಾನದ (Rajasthan) ಖತರ್ನಾಕ್ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುಭಾಷ್ ಬಿಜಾರಾಣಿ ಮತ್ತು ರಣವೀರ್ ಬಿಜಾರಾಣಿ ಎಂದು ಗುರುತಿಸಲಾಗಿದೆ. ಇನ್ನೂ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕದ್ದ ಸ್ಕೂಟರ್ ಅಪಘಾತ ಮಾಡಿಕೊಂಡು ಸಿಕ್ಕಿ ಬಿದ್ದ ಕಳ್ಳ!
ಬಂಧಿತ ಆರೋಪಿ ರಣವೀರ್ ಬಿಜಾರಾಣಿ 2014 ರಲ್ಲಿ ಮೊದಲ ಬಾರಿಗೆ ಗುಜರಾತ್ನ ಧೋಲೇರಾದಲ್ಲಿ ಭೂಮಿ ಖರೀದಿಸಿದ್ದ. ಸುಭಾಷ್ 30 ಲಕ್ಷ ರೂ. ಕೊಟ್ಟು ಭೂಮಿ ಖರೀದಿಸಿದ್ದ. ನಂತರ ಇಬ್ಬರೂ ಸೇರಿ 2021 ರಲ್ಲಿ ನೆಕ್ಸಾ ಎವರ್ಗ್ರೀನ್ ಕಂಪನಿಯನ್ನು ಅಹಮದಾಬಾದ್ನಲ್ಲಿ ನೋಂದಾಯಿಸಿಕೊಂಡಿದ್ದರು. ಆ ನಂತರ ಕಂಪನಿಯು ಧೋಲೇರಾ ಸ್ಮಾರ್ಟ್ ಸಿಟಿಯ ಭಾಗ ಎಂದು ಹೇಳಿಕೊಂಡು, ಹೆಚ್ಚಿನ ಲಾಭ ಮತ್ತು ಭೂಮಿ ನೀಡುವ ಆಮಿಷವೊಡ್ಡಿ ಹೂಡಿಕೆದಾರರನ್ನು ಸೆಳೆದಿದ್ದಾರೆ. ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಗಳ ಫೋಟೋಗಳನ್ನು ತೋರಿಸಿ, ಜನರಿಂದ ಹಣ ಪಡೆದಿದ್ದಾರೆ. ಅಲ್ಲದೇ ಹಣ ಹೂಡಲು ಹೆಚ್ಚು ಜನರನ್ನು ತಮ್ಮ ಗುಂಪಿಗೆ ಸೇರಿಸಿದವರಿಗೆ ಕಾರು, ಬೈಕ್ನಂತಹ ಬಹುಮಾನ ಕೊಡುವುದಾಗಿ ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಇನ್ನೂ ಆರೋಪಿಗಳು ಈ ಹಣದಲ್ಲಿ ಐಷಾರಾಮಿ ಕಾರುಗಳು, ಗಣಿ, ರಾಜಸ್ಥಾನದಲ್ಲಿ ಹೋಟೆಲ್ಗಳು, ಅಹಮದಾಬಾದ್ನಲ್ಲಿ ಫ್ಲ್ಯಾಟ್ಗಳು ಮತ್ತು ಗೋವಾದಲ್ಲಿ 25 ರೆಸಾರ್ಟ್ಗಳನ್ನು ಖರೀದಿಸಿದ್ದರು. ವಂಚನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ಕಚೇರಿಗಳನ್ನು ಮುಚ್ಚಿ ಪರಾರಿಯಾಗಿದ್ದರು. ಈಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆಯ ಬಗ್ಗೆ ತನಿಖೆ ನಡೆಸುತ್ತಿದೆ.
ಏನಿದು ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆ?
ಧೋಲೇರಾ ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಮತ್ತು ಗುಜರಾತ್ ಸರ್ಕಾರದ ಜಂಟಿ ಯೋಜನೆಯಾಗಿದೆ. ಇದು ಭಾರತದ ಮೊದಲ ಹಸಿರು ಸ್ಮಾರ್ಟ್ ಸಿಟಿ. ಇದು ದೆಹಲಿಗಿಂತ ಎರಡು ಪಟ್ಟು ದೊಡ್ಡದಾಗಿದೆ (920 ಚದರ ಕಿ.ಮೀ). ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯು 2042 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ ಬಂಧಿತ ಆರೋಪಿಗಳು ಈ ಯೋಜನೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಸಂಶಯಾಸ್ಪದ ಸಾವು – DRF, RFO ಸೇರಿ ಐವರ ವಿರುದ್ಧ ಎಫ್ಐಆರ್