– ಶಾಸಕರು ಮಾತ್ರ ರೆಸಾರ್ಟ್ ವಾಸ
ಧಾರವಾಡ: ಧಾರವಾಡದ ಹೊರವಲಯದ ದಡ್ಡಿ ಕಮಲಾಪೂರದಲ್ಲಿದ್ದ ಬಡವರ ಮನೆಗಳನ್ನು ಅಧಿಕಾರಿಗಳು ಜೆಸಿಬಿಯಿಂದ ನೆಲಸಮ ಮಾಡಿಸಿರುವ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದೆ.
ಈ ದಡ್ಡಿಕಮಲಾಪೂರ ಗ್ರಾಮದಲ್ಲಿ ಗವಳಿ ಜನರು ಕಳೆದ 50 ವರ್ಷಗಳಿಂದ ವಾಸವಾಗಿದ್ದಾರೆ. ಇದೇ ಗ್ರಾಮದ ಪಕ್ಕ ಸರ್ಕಾರಿ ಜಮೀನು ಕೂಡ ಇತ್ತು. ಮಂಡಿಹಾಳ ಗ್ರಾಮ ಪಂಚಾಯತಿಗೆ ಬರುವ ಈ ಗ್ರಾಮಕ್ಕೆ ಆಶ್ರಯ ಯೋಜನೆ ಅಡಿಯಲ್ಲಿ ಸರ್ಕಾರಿ ಜಮೀನು ನೀಡಬೇಕೆಂದು ಠರಾವ್ ಮಾಡಿದ್ದರು. ಅದೇ ರೀತಿ ಜನರು 15 ಕ್ಕೂ ಹೆಚ್ಚು ಮನಗೆಳನ್ನು ಕಟ್ಟಿಕೊಂಡಿದ್ದರು.
ಧಾರವಾಡ ತಾಲೂಕಿಗೆ ಸಂಬಂಧಿಸಿದ ಅಧಿಕಾರಿಗಳು ಏಕಾಎಕಿ ಬಂದು ಮನೆಗಳನ್ನು ಕೆಡವಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಮಗೆ ಮುಂಚಿತವಾಗಿ ನೋಟಿಸ್ ಕೂಡ ನೀಡದೇ ಮನೆಗಳನ್ನು ಕೆಡವಿರುವುದು ಯಾವ ರೀತಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದೇ ಮನೆಗಳ ಹಿಂದೆ ಮಹಿಷಿ ಟ್ರಸ್ಟ್ ಜಾಗ ಇದ್ದು, ಅವರ ಬೆಂಬಲಕ್ಕೆ ನಿಲ್ಲಲು ಈ ರೀತಿ ಮನೆಗಳನ್ನು ಕೆಡವಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಚಾರವನ್ನು ಶಾಸಕರಿಗೆ ತಿಳಿಸಿ, ಅನ್ಯಾಯವನ್ನು ಹೇಳಿಕೊಳ್ಳಬೇಕೆಂದರೆ ಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣನವರ ರೆಸಾರ್ಟ್ನಲ್ಲಿ ಕುಳಿತಿದ್ದಾರೆ. ನಮ್ಮ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವುದು, ಮನೆಗಳಿಲ್ಲದೆ ಹೇಗೆ ಬದುಕುವುದು ಎಂದು ಗ್ರಾಮಸ್ಥರು ಅಸಹಾಯಕತೆ ತೋಡಿಕೊಂಡಿದ್ದಾರೆ.