ತುಮಕೂರು: ವರದಕ್ಷಿಣೆ ಕಿರುಕುಳ ಆರೋಪದಿಂದ ಗೃಹಿಣಿ ನೇಣಿಗೆ ಶರಣಾದ ಘಟನೆ ತುಮಕೂರು ನಗರದ ಉಪ್ಪಾರಹಳ್ಳಿಯಲ್ಲಿ ನಡೆದಿದೆ.
ಕಾವ್ಯ(23) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಗುಬ್ಬಿ ಮೂಲದವಳಾಗಿರುವ ಕಾವ್ಯ ಕಳೆದ ನಾಲ್ಕು ವರ್ಷಗಳ ಹಿಂದೆ ಅಂಜನ್ ಎಂಬವನ ಜೊತೆ ಮದುವೆ ಮಾಡಿಕೊಂಡಿದ್ದಳು. ವರದಕ್ಷಿಣೆ ಕಿರುಕುಳಕ್ಕೆ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರತಿದಿನ ಅಂಜನ್ ವರದಕ್ಷಿಣೆಗಾಗಿ ಕಾವ್ಯಗೆ ಕಾಟ ನೀಡುತ್ತಿದ್ದನು. ಇದಕ್ಕೆ ಬೇಸತ್ತು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾವ್ಯ ಕುಟುಂಬಸ್ಥರು ಪತಿ ಅಂಜನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡುತ್ತಿದ್ದಾರೆ.
ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಸ್ಥಳಕ್ಕೆ ಜಯನಗರ ಪೋಲೀಸರು ಭೇಟಿ ನೀಡಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.