ಡೆಹ್ರಾಡೂನ್: ವಿದ್ಯಾರ್ಥಿನಿಗೆ ನಡುರಾತ್ರಿ ಸಂದೇಶ ರವಾನೆ ಮಾಡಿದ್ದ ಪ್ರೊಫೆಸರ್, ತನ್ನ ಪತ್ನಿ ಮನೆಯಲ್ಲಿ ಇಲ್ಲ. ಬಂದು ಅಡುಗೆ ಮಾಡಿಕೊಡು ಎಂದು ಮೆಸೇಜ್ ಮಾಡಿ ಕಿರುಕುಳ ನೀಡಿರುವ ಘಟನೆ ಉತ್ತರಖಂಡ್ ಪಂತ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಪ್ರೊಫೆಸರ್ ಕೆಟ್ಟ ಸಂದೇಶದ ಕುರಿತು ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ವಿಸಿ ಅವರಿಗೆ ದೂರು ನೀಡಿದ್ದು, ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್ ವಾರ್ಡನ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ವಿದ್ಯಾರ್ಥಿನಿ ವಿಸಿ ಅವರಿಗೆ ಸಂದೇಶದ ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದು, ವಿಶ್ವವಿದ್ಯಾಲಯ ಕಮಿಟಿ ಪ್ರೊಫೆಸರ್ ನನ್ನು ಹಾಸ್ಟೆಲ್ ವಾರ್ಡನ್ ಹುದ್ದೆಯಿಂದ ತೆರವು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಪ್ರೊಫೆಸರ್ ವಿರುದ್ಧ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಸಂಬಂಧ ಮಾಹಿತಿ ಪಡೆದಿರುವ ರಾಜ್ಯಪಾಲರು ಪ್ರೊಫೆಸರ್ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಎಪಿ ಶರ್ಮಾ, ರಾಜ್ಯಪಾಲರ ನಿರ್ದೇಶನದಂತೆ ವಾರ್ಡನ್ ಹುದ್ದೆಯಿಂದ ತೆಗೆದು ಹಾಕಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದೇವೆ. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗಂತೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.