ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿರುವ ಘಟನೆ ನಗರದ ಕಸ್ತೂರಿನಗರದ ಛಾಯ ಆಸ್ಪತ್ರೆಯಲ್ಲಿ ನಡೆದಿದೆ.
ಪೂಜಾ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ದುರ್ದೈವಿ. ಕಳೆದ ಭಾನುವಾರ ಜ್ವರ ಎಂದು ಪೋಷಕರು ಪೂಜಾ ರನ್ನು ಛಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಡೆಂಗ್ಯೂ ಜ್ವರ ಎಂದು ಹೇಳಿ ಆಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರವೇ ಪೂಜಾ ಮೃತಪಟ್ಟಿದ್ದಾರೆ. ಆದರೂ ವೈದ್ಯರು ಐಸಿಯುವಿನಲ್ಲಿಟ್ಟು ಯಾರಿಗೂ ಯುವತಿಯನ್ನ ನೋಡಲು ಬಿಟ್ಟಿಲ್ಲ. ಗುರುವಾರ ಮಧ್ಯಾಹ್ನ ವೈದ್ಯರು ಪೂಜಾ ಮೃತಪಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. ಓವರ್ ಡೊಸೇಜ್ ಆಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಸಾವಿನಿಂದ ಆಕ್ರೋಶಗೊಂಡು ಆಸ್ಪತ್ರೆಯ ಕಿಟಿಕಿ ಗಾಜು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.
ಘಟನೆಯ ಬಗ್ಗೆ ತಿಳಿದು ರಾಮಮೂರ್ತಿನಗರ ಮತ್ತು ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ಅವರ ಮಧ್ಯಸ್ತಿಕೆಯಲ್ಲಿ ಸೆಟಲ್ಮೆಂಟ್ ನಡೆದಿದ್ದು, ಆಸ್ಪತ್ರೆಯವರು ಸುಮಾರು 2 ಲಕ್ಷ ರೂ. ಹಣ ಕೊಟ್ಟು ಕೊನೆಗೆ ಮೃತದೇಹವನ್ನು ಕೊಟ್ಟು ಕಳಿಸಿದ್ದಾರೆ.
ಸೆಟಲ್ಮೆಂಟ್ ಆಗೋವರೆಗೂ ಸಂಬಂಧಿಕರು ದೇಹವನ್ನು ತೆಗೆದುಕೊಂಡು ಹೋಗದೇ, ಸೆಟಲ್ಮೆಂಟ್ ಆದ ನಂತರ ದೇಹವನ್ನ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಡೀಲ್ ಮಾಡಿಸಿದ್ದು ವಿಪರ್ಯಾಸವಾಗಿದೆ.