ಬೆಂಗಳೂರು: ಸ್ಪರ್ಶ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಕ್ಕೆ ರೋಗಿ ಸಾವನ್ನಪ್ಪಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ನಗರದ ಗೋರಗುಂಟೆಪಾಳ್ಯದ ಸ್ಪರ್ಶ್ ಆಸ್ಪತ್ರೆಗೆ ಕಳೆದ ಒಂದು ವಾರದ ಹಿಂದೆ ಧನಲಕ್ಷ್ಮಿ ಎಂಬವರು ಶ್ವಾಸಕೋಶ ಚಿಕಿತ್ಸೆಗೆ ಎಂದು ದಾಖಲಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿದ್ದು, ಧನಲಕ್ಷ್ಮಿ ಇಂದು ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಹಬ್ಬ ಇರುವುದರಿಂದ ಕುಟುಂಬಸ್ಥರು ಇಂದು ಒಂದು ದಿನ ಆಸ್ಪತ್ರೆಯಲ್ಲಿಯೇ ಇರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬುಧವಾರ ಸಂಜೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ಚಿಕಿತ್ಸೆ ನೀಡಲು ವೈದ್ಯರಿರಲಿಲ್ಲ. ಹಾಗಾಗಿ ಆಸ್ಪತ್ರೆಯ ನರ್ಸ್ಗಳೇ ಚಿಕಿತ್ಸೆ ನೀಡಿದ್ದಾರೆ. ನರ್ಸ್ಗಳು ಚಿಕಿತ್ಸೆ ನೀಡಿದ ಕೆಲ ಸಮಯದಲ್ಲಿಯೇ ರೋಗಿ ಧನಲಕ್ಷ್ಮಿ ಸಾವನ್ನಪ್ಪಿದ್ದಾರೆ. ರೋಗಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆಯ ಅಧಿಕಾರಿಗಳ ಜೊತೆ ಕುಟುಂಬಸ್ಥರು ವಾಗ್ವಾದ ನಡೆಸಿದರು.
ಈ ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆರ್ ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಪೊಲೀಸರು ಬಂದರೂ ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯರು ಇರಲಿಲ್ಲ. ಇದರಿಂದ ಕುಟುಂಬಸ್ಥರು ಮತ್ತಷ್ಟು ಕೆರಳಿದರು.