ಕಲಬುರಗಿ/ಹುಬ್ಬಳ್ಳಿ: ಕಳೆದ ಒಂದು ತಿಂಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಕಲಬುರಗಿಯ ಚಿತ್ತಾಪುರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಸಜ್ಜಾ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.
ಆದ್ರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತು, ಸಜ್ಜಾ ಬೆಳೆ ಬೆಳೆದೇ ಇಲ್ಲ ಅಂತ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ. ಈ ವರದಿ ಸುಳ್ಳು ಅಂತ ರೈತ ಮುಖಂಡರೇ ಖುದ್ದು ಸರ್ವೇ ಮಾಡಿ ಇದನ್ನ ತೋಟಗಾರಿಕೆ ಇಲಾಖೆಗೆ ತೋರಿಸಿ ಸರಿಯಾದ ವರದಿ ಸಲ್ಲಿಸುವಂತೆ ಆಗ್ರಹಿಸಿದ್ದಾರೆ.
ಇತ್ತ ಚಿಕ್ಕೋಡಿಯ ರಾಯಭಾಗ ಹಾಗೂ ಗೋಕಾಕ್ ಭಾಗದಲ್ಲಿ ರೈತರು ಕಷ್ಟಪಟ್ಟು ಬೆಳದಿದ್ದ ಕಬ್ಬು, ಗೋವಿನ ಜೋಳ, ಮುಸುಕಿನ ಜೋಳ ಸೈನಿಕ ಹುಳುವಿನ ಪಾಲಾಗಿದೆ.
ಹುಬ್ಬಳ್ಳಿಯ ಬಡಿಗೇರ ಓಣಿಯಲ್ಲಿ ಮನೆಯ ಗೋಡೆ ಕುಸಿದು ಒಂದು ಕಾರು ಹಾಗೂ ಎರಡು ಬೈಕ್ ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಟ್ಟಿನಲ್ಲಿ ಭಾರೀ ಮಳೆಯಿಂದ ರಾಜ್ಯದ ರೈತರ ಬದುಕು ಮೂರಾಬಟ್ಟೆಯಾಗಿದೆ.