ಅಮರಾವತಿ: ಕೆಳವರ್ಗದ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳನ್ನು ಹೆತ್ತ ತಂದೆಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
20 ವರ್ಷದ ಇಂದ್ರಜಾ ಕೊಲೆಯಾದ ದುರ್ದೈವಿ. ಪ್ರಕಾಶಂ ಜಿಲ್ಲೆಯ ಕೋಮರೋಲು ಮಂಡಲ ವ್ಯಾಪ್ತಿಯಲ್ಲಿ ಬರುವ ನಾಗಿರೆಡ್ಡಿಪಾಳ್ಯದಲ್ಲಿ ವಾಸವಾಗಿದ್ದ ಇಂದ್ರಜಾ ಅದೇ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ಭಾನುವಾರ ಇದೇ ವಿಚಾರಕ್ಕೆ ತಂದೆ ಪಾಪಯ್ಯನೊಂದಿಗೆ ಮಗಳು ಜಗಳವಾಡಿಕೊಂಡಿದ್ದಳು.
- Advertisement 2
ಇದರಿಂದ ಸಿಟ್ಟಿಗೆದ್ದ ಪಾಪಯ್ಯ ತಡರಾತ್ರಿ 1ರ ವೇಳೆ ಮಗಳಿಗೆ ನೇಣು ಹಾಕಿ ಕೊಂದಿದ್ದಾನೆ. ಬಳಿಕ ಇಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರಿಗೆ ನಂಬಿಸಿ, ಅವಸರವಾಗಿ ಅಂತ್ಯ ಸಂಸ್ಕಾರ ನಡೆಸಿದ್ದ. ಈತನ ನಡವಳಿಕೆಯಿಂದ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.
- Advertisement 3
- Advertisement 4
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾಪಯ್ಯನನ್ನು ವಶಕ್ಕೆ ಪಡೆದುಕೊಂಡಿದ್ದರು. ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಮಗಳ ಹತ್ಯೆ ಮಾಡಿರುವ ವಿಚಾರವನ್ನು ಪಾಪಯ್ಯ ಬಾಯಿ ಬಿಟ್ಟಿದ್ದಾನೆ. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದ ಪಾಪಯ್ಯ, ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಗಳು ಕೆಳ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮಗಳಿಗೆ ತನ್ನ ಸಮುದಾಯದ ಯುವಕನೊಂದಿಗೆ ಮದುವೆಯಾಗುವಂತೆಯೂ ಸಹ ಪಾಪಯ್ಯ ಕೇಳಿಕೊಂಡಿದ್ದ. ಆದರೆ ತನ್ನ ಮಾತಿಗೆ ಒಪ್ಪದಕ್ಕೆ ಮರ್ಯಾದೆ ಉಳಿಸಲು ಇಂದ್ರಜಾಳನ್ನು ಕೊಲೆಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv