ಹೈದರಾಬಾದ್: ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಾಗಲ್ ಕೊಂಡ ಗ್ರಾಮದ ತನ್ನ ಮನೆಯಲ್ಲಿ 21 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದು, ಇದನ್ನು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ.
ಅನ್ಯಧರ್ಮದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಯುವತಿ ಎರಡು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದಳು. ಆದರೆ ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆಕೆಯನ್ನು ಪತ್ತೆ ಹಚ್ಚಿ ತೆಲಂಗಾಣಕ್ಕೆ ಪೊಲೀಸರು ಕರೆತಂದಿದ್ದರು.
ಶುಕ್ರವಾರ ಯುವತಿ ಶವ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ಕುತ್ತಿಗೆ ಮೇಲೆ ಅನೇಕ ಗಾಯಗಳಾಗಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ
ಬೇರೆ ಧರ್ಮದ ಹುಡುಗನೊಂದಿಗೆ ಓಡಿಹೋಗಿದ್ದಕ್ಕಾಗಿ ಆಕೆಯ ತಂದೆ ಯುವತಿಯನ್ನು ಕೊಂದಿರಬಹುದು ಎಂಬ ಅನುಮಾನ ಬಂದಿದೆ. ಆ ಸಮಯದಲ್ಲಿ ಕುಟುಂಬದವರು ಕೌನ್ಸಲಿಂಗ್ ಬಳಿಕ ಯುವತಿಯನ್ನು ವಾಪಸ್ ಕರೆತಂದಿದ್ದರು. ಆದರೆ ಆಕೆಯ ತಂದೆ ಈ ವಿಚಾರವಾಗಿ ಬೇಸರಗೊಂಡಿದ್ದರು ಎಂದು ಆದಿಲಾಬಾದ್ನ ಪೊಲೀಸ್ ವರಿಷ್ಠಾಧಿಕಾರಿ ಉದಯ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಆಡಳಿತ ಮಂಡಳಿ ಎಚ್ಚರಿಕೆಗೆ ಡೋಂಟ್ಕೇರ್- ಹಿಜಬ್ ಧರಿಸಿ ಬಂದ 15 ವಿದ್ಯಾರ್ಥಿನಿಯರು!