ಕಾರವಾರ: ಉದ್ಯೋಗ ಕೊಡಿಸುವುದಾಗಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿಯ ಉಂಚಳ್ಳಿಯ ಅಜೀತ್ ಶ್ರೀಕಾಂತ್ ನಾಡಿಗ (25), ಬನವಾಸಿಯ ಗೊಲಗೇರಿ ಓಣಿಯ ಧನುಶ್ಯ ಕುಮಾರ್ ಅಲಿಯಾಸ್ ದಿಲೀಪ್ ಕುಮಾರ್ ಶೆಟ್ಟಿ (25) ಮತ್ತು ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಗೋಪಾಳದ ಪದ್ಮಜಾ ಡಿ.ಎನ್ (50) ಬಂಧಿತ ಆರೋಪಿಗಳು. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!
ಏನಿದು ಘಟನೆ?:
ಶಿರಸಿ ಮೂಲದ ವ್ಯಕ್ತಿಗೆ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ 17 ಜನವರಿ 2022ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಸಿ ಮಹಿಳೆಯೊಂದಿಗೆ ನಿಲ್ಲಿಸಿ ಫೋಟೋ, ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಈ ಫೋಟೋ ಮತ್ತು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
18 ಜನವರಿ 2022 ರಂದು ಶಿರಸಿ ಮೂಲದ ವ್ಯಕ್ತಿಯ ತಂದೆಯ ಬಳಿ ಹೋಗಿ ನಿಮ್ಮ ಮಗ ಮಹಿಳೆಯ ಜೊತೆಗೆ ಇರುವ ಕೆಲವು ನಗ್ನ ಫೋಟೋಗಳು ಮತ್ತು ವೀಡಿಯೋಗಳು ಇವೆ, ಅವುಗಳನ್ನು ಡಿಲೀಟ್ ಮಾಡಲು ಮತ್ತು ನಿಮ್ಮ ಮಗ ಜೀವಂತವಾಗಿ ಬರಲು 15 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ ಬಲವಂತವಾಗಿ ಭದ್ರತೆಗಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ ಸುಳ್ಳು ಕರಾರು ಪತ್ರ ಬರೆಸಿಕೊಂಡಿದ್ದಲ್ಲದೇ ಬ್ಲ್ಯಾಂಕ್ ಚೆಕ್ ಪಡೆದಿದ್ದರು. ಇದನ್ನೂ ಓದಿ: ಹಾಸ್ಟೆಲ್ಗೆ ಟ್ರಾವೆಲ್ ಬ್ಯಾಗ್ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ
ಒಂದು ವೇಳೆ 15 ಲಕ್ಷ ರೂ. ಹಣ ಕೊಡದೇ ಇದ್ದರೆ ಬಲತ್ಕಾರದ ದೂರು ದಾಖಲಿಸುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಹೆದರಿಸಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ನೊಂದ ವ್ಯಕ್ತಿ ನಿನ್ನೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ 1 ದಿನದಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್. ಭದ್ರಿನಾಥ್, ಶಿರಸಿ ಡಿವೈಎಸ್ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಸಿಪಿಐ ರಾಮಚಂದ್ರ ನಾಯ್ಕ ಹಾಗೂ ಸಿಬ್ಬಂದಿ ಮಹಾಂತೇಶ್ ಬಾರಕೇರ, ಅಶೋಕ ನಾಯ್ಕ, ರಾಮಯ್ಯ ಪೂಜಾರಿ, ವಿದ್ಯಾ ಎಚ್.ವಿ, ಯಶೋದಾ ನಾಯ್ಕ, ಪಾಂಡು ನಾಗೋಜಿ ರವರು ಭಾಗವಹಿಸಿದ್ದರು.