ಮುಂಬೈ: ಏಷ್ಯಾಕಪ್ನಲ್ಲಿ (Asia Cup) ಭಾರತದ ಸೋಲಿನ ಬಳಿಕ ಕೋಚ್ ದ್ರಾವಿಡ್ (Rahul Dravid) ಬಗ್ಗೆ ಟೀಕೆಗಳು ಕೇಳಿ ಬರುತ್ತಿದೆ. ದ್ರಾವಿಡ್ ಕೋಚ್ ಆಗಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ ನೆನಪಿರಲಿ ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಸಬಾ ಕರೀಂ (Saba Karim) ಕಿವಿಮಾತು ಹೇಳಿದ್ದಾರೆ.
ಏಷ್ಯಾಕಪ್ ಆರಂಭಕ್ಕೂ ಮುನ್ನ ಈ ಬಾರಿ ಏಷ್ಯಾಕಪ್ ಎತ್ತಿಹಿಡಿಯುವ ಹಾಟ್ ಫೇವರೆಟ್ ತಂಡವಾಗಿ ಭಾರತ ಗುರುತಿಸಿಕೊಂಡಿತ್ತು. ಅಭಿಮಾನಿಗಳು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ (Rohit sharma) ಶರ್ಮಾ ಸಾರಥ್ಯದಲ್ಲಿ ಏಷ್ಯಾಕಪ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Sri Lanka) ವಿರುದ್ಧ ಸೋಲಿನೊಂದಿಗೆ ಭಾರತದ ಪ್ರಶಸ್ತಿ ಕನಸಿಗೆ ಬ್ರೇಕ್ ಬಿದ್ದಿತು. ಇದರಿಂದಾಗಿ ಇದೀಗ ಕೋಚ್ ದ್ರಾವಿಡ್ ಕುರಿತಾಗಿ ಹಲವು ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್
ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಸಬಾ ಕರೀಂ, ದ್ರಾವಿಡ್ ಕೋಚ್ ಆಗಿ ಹನಿಮೂನ್ ಅವಧಿ ಮುಗಿದಿದೆ. ಇದೀಗ ದ್ರಾವಿಡ್, ತಂಡ ಮಹತ್ವದ ಟೂರ್ನಿಗಳಲ್ಲಿ ಮುಗ್ಗರಿಸುವ ಬದಲು ಕಪ್ ಗೆಲ್ಲುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ದ್ರಾವಿಡ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಹಾಗಾಗಿ ಈಗಿನಿಂದಲೇ ದ್ರಾವಿಡ್ ಐಸಿಸಿಯ (ICC) ಮಹತ್ವದ ಟೂರ್ನಿಗೆ ತಂಡವನ್ನು ಸಿದ್ಧಪಡಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಸಾಧನೆಗೆ ಹೆಮ್ಮೆ ಇದೆ. ಆದರೆ ಏಕದಿನ ಮತ್ತು ಟಿ20 ಮಾದರಿಯ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಬಗ್ಗೆ ಪ್ರಶ್ನೆಗಳಿವೆ ಈ ಬಗ್ಗೆ ದ್ರಾವಿಡ್ ಗಮನ ಹರಿಸಬೇಕು ಎಂದರು. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100
ರವಿಶಾಸ್ತ್ರಿ ಬಳಿಕ 2021ರಲ್ಲಿ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಆಧಿಕಾರ ವಹಿಸಿಕೊಂಡಿದ್ದಾರೆ. ಆ ಬಳಿಕ ಭಾರತ ಹಲವು ಟೂರ್ನಿಗಳನ್ನು ಗೆದ್ದರೂ, ಏಷ್ಯಾಕಪ್ ಸೋಲು ದ್ರಾವಿಡ್ರನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಹಾಗಾಗಿ ದ್ರಾವಿಡ್ ಟಿ20 ವಿಶ್ವಕಪ್ಗೂ ಮುನ್ನ ತಂಡದ ಆಟಗಾರರಿಗೆ ಹೊಸ ಹುರುಪನ್ನು ತುಂಬಿ ಆಡಿಸಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಏಕದಿನ ವಿಶ್ವಕಪ್ ಕೂಡ ಮುಂದಿನ ವರ್ಷ ಎದುರಾಗುವ ಕಾರಣ ದ್ರಾವಿಡ್ ಈಗಿನಿಂದಲೇ ತಂಡವನ್ನು ಸಿದ್ಧಪಡಿಸಬೇಕಾಗಿದೆ.