ಶಿಲ್ಲಾಂಗ್: ಮೇಘಾಲಯಕ್ಕೆ (Meghalaya) ಹನಿಮೂನ್ಗೆ (Honeymoo) ತೆರಳಿದ್ದಾಗ ಪತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಗಳು ಬಯಲಾಗುತ್ತಿವೆ. ಹನಿಮೂನ್ ಹಂತಕಿ ಹಾಗೂ ರಾಜ್ ಕೊನೆಗೂ ತಮ್ಮಿಬ್ಬರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಈ ಕುರಿತು ಖಾಸಿ ಹಿಲ್ಸ್ನ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ಮಾತನಾಡಿ, ಮೇಘಾಲಯ ಹನಿಮೂನ್ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡವು ತನಿಖೆ ನಡೆಸುತ್ತಿದೆ. ಸೋನಮ್ (Sonam Raghuvanshi) ಮೇಲೆ ಮೃತನ ಕುಟುಂಬಸ್ಥರು ನಾರ್ಕೊ ಪರೀಕ್ಷೆ (Narco test) ನಡೆಸಬೇಕೆಂದು ಬೇಡಿಕೆಯಿಟ್ಟಿದ್ದರು. ಆದರೆ ತನಿಖೆಗೆ ಅವಶ್ಯವಾಗಿರುವ ಎಲ್ಲಾ ಸಾಕ್ಷಿಗಳು ಇರುವುದರಿಂದ ಪರೀಕ್ಷೆಯನ್ನು ಕೈಬಿಟ್ಟಿದ್ದೇವೆ. ಸದ್ಯ ಆರೋಪಿಗಳಾದ ಸೋನಮ್ ರಘುವಂಶಿ ಹಾಗೂ ರಾಜ್ ಕುಶ್ವಾಹ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: 3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ
ಈಗಾಗಲೇ ಆರೋಪಿಗಳು ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳಿಂದ ಘಟನೆಯನ್ನು ಪುನಃ ಸೃಷ್ಟಿಸಿದ್ದೇವೆ. ನಮಗೆ ಸಾಕ್ಷಿ, ಪುರಾವೆಗಳು ಸಿಕ್ಕಿವೆ. ಹೀಗಾಗಿ ನಾರ್ಕೊ ಪರೀಕ್ಷೆ ನಡೆಸುವ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಯಾವುದೇ ಸಾಕ್ಷಿಗಳಿಲ್ಲದೇ ಇರುವಾಗ ನಾರ್ಕೊ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ನಾರ್ಕೊ ಪರೀಕ್ಷೆಯನ್ನು ನಿಷೇಧಿಸಿದೆ ಎಂದು ತಿಳಿಸಿದರು.
ಈ ಕೊಲೆಗೆ ನಿರ್ದಿಷ್ಟ ಕಾರಣವೆಂದರೆ ಹಣ. ಆದರೆ ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ರಾಜ್ನನ್ನು ಕೊಲ್ಲಲು ಇವರಿಗೆ ಹಲವು ಕಾರಣಗಳಿವೆ. ಒಂದು, ಸೋನಮ್ ಹಾಗೂ ಆರೋಪಿ ರಾಜ್ ನಡುವಿನ ಪ್ರೀತಿ, ಮನೆಯವರ ಒಪ್ಪಿಗೆ ಎಲ್ಲವೂ ಮುಖ್ಯವಾಗಿತ್ತು. ಹೀಗಾಗಿ ರಾಜ್ನನ್ನು ಕೊಲ್ಲುವುದು ಉತ್ತಮ ಎಂದು ಅಂದುಕೊಂಡಿದ್ದರು ಎಂದರು.
ಸದ್ಯ ಪೊಲೀಸರು ಫ್ಲ್ಯಾಟ್ ಮಾಲೀಕನನ್ನು ವಿಚಾರಣೆ ನಡೆಸುತ್ತಿದ್ದು, ಸೋನಮ್ ಬಿಟ್ಟು ಹೋಗಿದ್ದ ಬ್ಯಾಗ್ ತೆಗೆದುಹಾಕಲು ಕಾರಣವೇನು ಎಂದು ಪತ್ತೆ ಹಚ್ಚುತ್ತಿದ್ದಾರೆ. ಸೋನಮ್ ಮಾಹಿತಿ ಪ್ರಕಾರ, ಬ್ಯಾಗ್ನಲ್ಲಿ ಪಿಸ್ತೂಲ್, ಫೋನ್, ರಾಜ್ ಆಭರಣಗಳು ಮತ್ತು 5 ಲಕ್ಷ ರೂ. ನಗದು ಇತ್ತು ತಿಳಿಸಿಲಾಗಿದೆ. ಹೀಗಾಗಿ ಸಾಕ್ಷಿ ನಾಶಮಾಡಲು ಬ್ಯಾಗ್ ತೆಗೆದುಹಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಈವರೆಗೆ ಸೋನಮ್ ತಂದಿದ್ದ ರಾಜ್ನ ಆಭರಣಗಳನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಗುರುವಾರ ಫ್ಲ್ಯಾಟ್ ಮಾಲೀಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.ಇದನ್ನೂ ಓದಿ: ಮಂಗಳೂರಲ್ಲಿ ‘ನೋಂದಣಿ’ ಗೋಲ್ಮಾಲ್ – ಕೋಟಿ ಬೆಲೆಯ ಕಾರಿಗೆ ಲಕ್ಷ ಬೆಲೆಯ ಕಾರಿನ ಮಾಡೆಲ್ ನಂಬರ್