ನವದೆಹಲಿ: ಈ ವರ್ಷ ಮಳೆ ಸಂಬಂಧಿ ದುರಂತಕ್ಕೆ ಕರ್ನಾಟಕದಲ್ಲಿ 166, ದೇಶದಲ್ಲಿ ಒಟ್ಟು 1,276 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹಸಚಿವಾಲಯ ಹೇಳಿದೆ.
ಈ ವರ್ಷದ ಆರಂಭದಿಂದ ಆಗಸ್ಟ್ 26 ವರೆಗಿನ ವರದಿಯನ್ನು ಪ್ರಕಟಿಸಿದ್ದು ಕೇರಳದಲ್ಲಿ ಅತಿ ಹೆಚ್ಚು 443 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶ(218), ಪಶ್ಚಿಮ ಬಂಗಾಳ(198), ಅಸ್ಸಾಂ(49) ಮೃತಪಟ್ಟಿದ್ದಾರೆ. ಭಾರೀ ಮಳೆಯಾದ ಕಾರಣ 17,14,863 ಮಂದಿ ಈಗ ಸಂತ್ರಸ್ತರ ಕೇಂದ್ರದಲ್ಲಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.
ಭಾನುವಾರ ನಡೆದ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇರಳ ಮತ್ತು ಮಳೆ ಪೀಡಿತ ರಾಜ್ಯಗಳ ಬಗ್ಗೆ ಮಾತನಾಡಿ ಕೇಂದ್ರದಿಂದ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದರು.
ಶುಕ್ರವಾರ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್ನ (ಡಿಪಿಎಸ್ಯು) ಮೂರು ಸಂಸ್ಥೆಗಳ ಮೂಲಕ ಕೊಡಗು ಜಿಲ್ಲೆಗೆ 7 ಕೋಟಿ ರೂ. ನೆರವು ಪ್ರಕಟಿಸಿದ್ದರು. ಅಲ್ಲದೇ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಹಣ ನೀಡುವುದಾಗಿ ತಿಳಿಸಿದ್ದರು.
ಜಿಲ್ಲೆಯಲ್ಲಾಗಿರುವ ಹಾನಿ ಕುರಿತಂತೆ ಕೇಂದ್ರ ಸರ್ಕಾರದ ನಷ್ಟ ಅಂದಾಜು ತಂಡ ಬಂದು ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಿದ ಬಳಿಕ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾಪನೆಗಳನ್ನು ಆಧರಿಸಿ ಕೇಂದ್ರದಿಂದ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.
ನೆರೆಯಿಂದಾಗಿ ಕೇರಳಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv