ಬೆಂಗಳೂರು: ತೆರಿಗೆ ಇಲಾಖೆಗೆ ದಾಳಿ ಮಾಡುವ ಅವಕಾಶ ಇದೆ. ಆದರೆ ಸಮಯ ಸೂಕ್ತವಲ್ಲ ಎಂದು ಹೇಳುವ ಮೂಲಕ ಐಟಿ ರೇಡ್ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಐಟಿ ಅಧಿಕಾರಿಗಳಿಗೆ ದಾಳಿ ಮಾಡುವ ಅವಕಾಶ ಇದೆ. ಆದರೆ ಚುನಾವಣಾ ಹೊಸ್ತಿಲಲ್ಲಿ, ನೀತಿ ಸಂಹಿತೆ ಬಂದಿದೆ, ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಟಿ ರೇಡ್ ಮಾಡುತ್ತಿರುವುದು ಉದ್ದೇಶಪೂರ್ವಕ, ರಾಜಕೀಯ ಪ್ರೇರಿತ ಎಂದು ಗೊತ್ತಾಗುತ್ತೆ. ಈ ಸಂದರ್ಭದಲ್ಲಿ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ – ಜೆಡಿಎಸ್ ಸಚಿವರ, ಶಾಸಕರ ಮೇಲೆ ದಾಳಿ ಸರಿಯಲ್ಲ ಎಂದು ಎಂಬಿಪಿ ಹೇಳಿದ್ದಾರೆ.
ನನಗೆ ಐಟಿ ದಾಳಿ ನಡೆಯುವುದರ ಬಗ್ಗೆ ಮಾಹಿತಿ ಇಲ್ಲ. ನಾನು ಐಟಿ ಇಲಾಖೆಯಲ್ಲಿ ಇಲ್ಲ. ಸಿಎಂಗೆ ಯಾರೋ ಮಾಹಿತಿ ನೀಡಿರಬಹುದು. ಕಾಂಗ್ರೆಸ್ ಮೇಲೆ ಐಟಿ ದಾಳಿ ಆಗುತ್ತಾ ಎಂಬ ವಿಷಯ ನನಗೆ ಗೊತ್ತಿಲ್ಲ. ನಮ್ಮ ಕೆಪಿಸಿಸಿ ಅಧ್ಯಕ್ಷರು, ನಾವು ಸಮ್ಮಿಶ್ರ ಸರ್ಕಾರದಲ್ಲಿ ಇದ್ದೀವಿ. ಜೆಡಿಎಸ್ ಸಚಿವರಾಗಲಿ, ಸಂಸದನಾಗಲಿ, ಎಂಎಲ್ಸಿ ಆಗಲಿ ಯಾರ ಮೇಲೆ ಆಗಲಿ ನಾವು ಇದನ್ನು ಖಂಡಿಸುತ್ತೇವೆ ಎಂದರು.
ದಾಳಿ ಕೇವಲ ಕಾಂಗ್ರೆಸ್ – ಜೆಡಿಎಸ್ ಮಾತ್ರವಲ್ಲ, ಬಿಜೆಪಿ ಅವರ ಮೇಲೂ ದಾಳಿ ಮಾಡಬಹುದಿತ್ತು. ಈಗ ಚುನಾವಣಾ ಸಮಯದಲ್ಲಿ ಐಟಿ ಇಲಾಖೆ ಕೀಳು ಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್- ಜೆಡಿಎಸ್ ಸಚಿವರ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡಿದ್ದಾರೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.