ಉಡುಪಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಸ್ತುವಾರಿ ವಹಿಸಿಕೊಂಡ ಉಡುಪಿ ಜಿಲ್ಲೆ ಮಾದಕ ಪದಾರ್ಥಗಳ ಅಡ್ಡೆಯಾಗಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇದಕ್ಕೆ ಸಾಕ್ಷಿ ಕೆಲವೇ ದಿನಗಳ ಅಂತರದಲ್ಲಿ ಪೊಲೀಸರಿಗೆ ಸೆರೆಸಿಕ್ಕ 32 ಕೆಜಿ ಗಾಂಜಾ.
ಮಣಿಪಾಲ ವ್ಯಾಪ್ತಿಯಲ್ಲಿ ಅಘಾದ ಪ್ರಮಾಣದಲ್ಲಿ ಗಾಂಜಾ ವಶವಾಗಿದೆ. ಉಡುಪಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಾದಕ ಪದಾರ್ಥಗಳ ಬಳಕೆಯ ಮೇಲೆ ಜಿಲ್ಲೆಯ ಹಲವೆಡೆಗಳಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ ಅಮಲು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ದಿನಗಳ ಅಂತರದಲ್ಲಿ ವಶಪಡಿಸಿಕೊಂಡ 32 ಕೆಜಿ ಗಾಂಜಾ ನಾಶ ಮಾಡಲಾಗಿದೆ.
ನಂದಿಕೂರು ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಪೊಲೀಸರು 32.883 ಕೆಜಿ ಗಾಂಜಾಕ್ಕೆ ಬೆಂಕಿ ಹಚ್ಚಿ ನಾಶ ಪಡಿಸಿದ್ದಾರೆ. ಹೆರಾಯಿನ್, ಮಾಫಿನ್, ಚರಾಸ್ಗಳು ಇದರಲ್ಲಿ ಸೇರಿದೆ. ಗಾಂಜಾ ನಾಶ ಸಂದರ್ಭ ವಿಷಯುಕ್ತ ಅನಿಲ ಬಿಡುಗಡೆಯಾಗುವುದರಿಂದ ಪೊಲೀಸರ ಮುನ್ನೆಚ್ಚರಿಕಾ ಕ್ರಮ ಅನುಸರಿಸಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ಅಮಲು ಪದಾರ್ಥಗಳ ನಾಶ ಮಾಡಲಾಯಿತು. ಜಿಲ್ಲೆಯಲ್ಲಿ ಮಣಿಪಾಲದಲ್ಲೇ ಅತೀ ಹೆಚ್ಚು ಗಾಂಜಾ ಪ್ರಕರಣಗಳು ದಾಖಲಾಗಿದ್ದು, ಆ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.
ಎಎಸ್ಪಿ ಕುಮಾರಚಂದ್ರ ಮಾಧ್ಯಮಗಳ ಜೊತೆ ಮಾತನಾಡಿ, ಗಾಂಜಾ ಮತ್ತು ಅಫೀಮು ಸೇವನೆ ಮಾಡುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದೇವೆ. ಕಾಲೇಜು ಕ್ಯಾಂಪಸ್ಗಳಲ್ಲೂ ಗೂಢಚಾರ್ಯ ಮಾಡಿ ದುಶ್ಚಟ ದಾಸರಿಗೆ ಕಾನೂನು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕ ಮಾಹಿತಿ ಮತ್ತು ಸಹಕಾರ ಅಗತ್ಯವಿದೆ ಎಂದು ಹೇಳಿದರು. ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕರಗೆ ಲಗಾಮು ಹಾಕುವ ಕಾರ್ಯ ಆಗಬೇಕು ಎಂಬೂದು ಪ್ರಜ್ಞಾವಂತರ ಒತ್ತಾಯ.