ಮಂಡ್ಯ: ಇಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಜೆಡಿಎಸ್ ಭದ್ರಕೋಟೆ ಮಂಡ್ಯಗೆ (Mandya) ತೆರಳಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಮಂಡ್ಯದ ಮನ್ಮುಲ್ನಲ್ಲಿ (Manmul) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಮೆಗಾ ಡೈರಿಯನ್ನು (Milk Dairy) ಅಮಿತ್ ಶಾ ಉದ್ಘಾಟಿಸಿದ್ದಾರೆ.
ಸಕ್ಕರೆ ನಾಡಿಗೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮದ್ದೂರು ತಾಲೂಕಿನ ಹುಲಿಗೆರೆಪುರ ಹೆಲಿಪ್ಯಾಡ್ಗೆ ಹೆಲಿಕಾಫ್ಟರ್ ಮೂಲಕ ಆಗಮಿಸಿದ ಅವರು ಬಳಿಕ ರಸ್ತೆ ಮಾರ್ಗವಾಗಿ ಮಂಡ್ಯದ ವಿವಿ ಆವರಣ ತಲುಪಿದ್ದಾರೆ. ಅಮಿತ್ ಶಾ ಅವರಿಗೆ ಅಪ್ಪಟ ರೇಷ್ಮೆ ಬಳಸಿ ತಯಾರಿಸಲಾಗಿರುವ ಮೈಸೂರು ಪೇಟವನ್ನು ಸ್ವಾಗತದ ವೇಳೆ ತೊಡಿಸಲಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಬೆಳ್ಳಿಯಲ್ಲಿ ತಯಾರಾಗಿರುವ ಪ್ರತಿಮೆಯನ್ನೂ ಉಡುಗೊರೆಯಾಗಿ ನೀಡಲಾಗಿದೆ.
ಅಮಿತ್ ಶಾ ಅವರು ಉದ್ಘಾಟಿಸಿರುವ ಮೆಗಾ ಡೈರಿ ಸುಮಾರು 260 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. 10-14 ಲಕ್ಷ ಲೀ. ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಇದು ಹೊಂದಿದ್ದು, 30 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದಿಸುವ ಸಾಮರ್ಥ್ಯವನ್ನೂ ಇದು ಹೊಂದಿದೆ. 2 ಲಕ್ಷ ಲೀ. ಯುಹೆಚ್ಡಿ ಹಾಲನ್ನು ಪ್ಯಾಕ್ ಮಾಡಬಹುದಾದ ಕಟ್ಟಡ ಇದಾಗಿದ್ದು, ಇಲ್ಲಿ ಬೆಣ್ಣೆ, ತುಪ್ಪ, ಪೇಡ, ಬರ್ಫಿ, ಕೋವಾ, ಲಾಡು, ಬೆಲ್ಲದ ಬರ್ಫಿ, ಮೊಸರು, ಮಜ್ಜಿಗೆ ತಯಾರಿಕಾ ಘಟಕವೂ ಇದೆ. ಮೆಗಾ ಡೈರಿಯಿಂದಾಗಿ ಮಂಡ್ಯ ಜಿಲ್ಲೆಯ 99 ಸಾವಿರ ರೈತರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಆಪರೇಷನ್ ಓಲ್ಡ್ ಮೈಸೂರು ಸುಳಿವು ನೀಡಿದ ಶಾ- ಜಾತಿ ಸಮೀಕರಣದ ಫಸ್ಟ್ ರಿಪೋರ್ಟ್ ಪಡೆದ ಚಾಣಕ್ಯ
ಉದ್ಘಾಟನೆ ಬಳಿಕ ಮಾತನಾಡಿದ ಅಮಿತ್ ಶಾ, ಸಹಕಾರಿಗಳಿಗೆ, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಮಂಡ್ಯ ಮೆಗಾ ಡೈರಿ ಉದ್ಘಾಟನೆ ಆಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮಿಲ್ಕ್ ಫ್ಲಾಂಟ್ ನಿರ್ಮಾಣ ಆಗಿದೆ. ಪ್ರತಿದಿನ 10 ಲಕ್ಷ ಲೀ. ಹಾಲು ಸಂಸ್ಕರಣೆ ಆಗುತ್ತದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀ. ಸಂಸ್ಕರಣೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಅಮಿತ್ ಶಾ ಭಾಷಣವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬರಡು ನೆಲದಲ್ಲೂ ಕಮಲ ಅರಳಿಸುವುದು ಅಮಿತ್ ಶಾಗೆ ಗೊತ್ತಿದೆ. ಅದಕ್ಕೆ ಅವರನ್ನು ಚುನಾವಣಾ ಚಾಣಾಕ್ಷ ಎನ್ನುತ್ತಾರೆ ಎಂದು ಹೊಗಳಿದರು. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ