ಬೆಂಗಳೂರು: ಅಮೆರಿಕದಂಥಾ ವಿದೇಶಗಳಲ್ಲಿ ನೆಲೆಸಿದ್ದರೂ ಕನ್ನಡತನ ಮರೆಯದ, ಬೇರುಗಳಿಗಾಗಿ ತುಡಿಯುವ ಅದೆಷ್ಟೋ ಮನಸುಗಳಿವೆ. ಇಂಥಾ ಮನಸುಗಳಿಂದಲೇ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಒಂದಷ್ಟು ಮೌಲ್ಯಯುತ ಕೊಡುಗೆಗಳೂ ಸಿಕ್ಕಿವೆ. ಇದೇ ರೀತಿಯ ಕನ್ನಡತನದ ಮನಸುಗಳೇ ಸೇರಿ ನಿರ್ಮಾಣ ಮಾಡಿರೋ ಚಿತ್ರ ರತ್ನಮಂಜರಿ. ಈಗಾಗಲೇ ನಾನಾ ದಿಕ್ಕುಗಳಿಂದ ಕುತೂಹಲ ಹುಟ್ಟಿಸುತ್ತಲೇ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ರತ್ನಮಂಜರಿ ಇದೇ ತಿಂಗಳ ಹದಿನೇಳರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.
ವಿದೇಶ ವಾಸಿಗಳಾಗಿರುವ ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ರತ್ನಮಂಜರಿಯನ್ನು ನಿರ್ಮಾಣ ಮಾಡಿದ್ದಾರೆ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರದ ಮೂಲಕವೇ ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಖಿಲಾ ಪ್ರಕಾಶ್, ಪಲ್ಲವಿ ರಾಜು ಮತ್ತು ಶ್ರದ್ಧಾ ಸಾಲಿಯಾನ್ ನಾಯಕಿಯರಾಗಿ ನಟಿಸಿದ್ದಾರೆ.
ಕಥೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರಬೇಕೆಂಬ ಪ್ರತಿಜ್ಞೆಯೊಂದಿಗೇ ರತ್ನಮಂಜರಿ ಶುರುವಾಗಿತ್ತು. ಹೇಳಿ ಕೇಳಿ ಇದು ವಿದೇಶದಲ್ಲಿ ಬೀಡು ಬಿಟ್ಟಿರುವ ಕನ್ನಡಿಗರೇ ಸೇರಿಕೊಂಡು ಮಾಡಿರೋ ಚಿತ್ರ. ಹಾಗಿದ್ದ ಮೇಲೆ ತಾಂತ್ರಿಕವಾಗಿಯೂ ಶ್ರೀಮಂತವಾಗಿರಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇದ್ದೇ ಇರುತ್ತೆ. ಇದನ್ನು ಮನಗಂಡೇ ಕನ್ನಡಕ್ಕೆ ತೀರಾ ಹೊಸತಾದ ತಾಂತ್ರಿಕ ಕೌಶಲ್ಯಗಳೊಂದಿಗೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಹಾಲಿವುಡ್ ಚಿತ್ರಗಳಿಗೆ ಕಾರ್ಯ ನಿರ್ವಹಿಸಿದ ತಂತ್ರಜ್ಞರೂ ರತ್ನಮಂಜರಿಗೆ ಸಾಥ್ ಕೊಟ್ಟಿದ್ದಾರೆ. ಈ ಕಾರಣದಿಂದಲೇ ಈ ಚಿತ್ರ ತಾಂತ್ರಿಕವಾಗಿ ಹಾಲಿವುಡ್ ಫ್ಲೇವರಿನೊಂದಿಗೆ ಮೂಡಿ ಬಂದಿದೆ. ಅದರ ಚಮತ್ಕಾರವೇನನ್ನೋದು ಇನ್ನು ವಾರದೊಪ್ಪತ್ತಿನಲ್ಲಿಯೇ ಗೊತ್ತಾಗಲಿದೆ!