ರಾಯಪುರ: ಸಹೋದ್ಯೋಗಿ ಗುಂಡು ಹಾರಿಸಿದ್ದರಿಂದ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಐದು ಸಿಬ್ಬಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಬೆಳಗ್ಗೆ 9ಕ್ಕೆ ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಕಡೇನಾರ್ ಶಿಬಿರದ ಐಟಿಬಿಪಿಯ 45 ಬೆಟಾಲಿಯನಿನಲ್ಲಿ ಘಟನೆ ನಡೆದಿದ್ದು, ಗುಂಡು ಹಾರಿಸಿದ ನಂತರ ಆರೋಪಿ ಕಾನ್ಸ್ಟೇಬಲ್ ತನಗೂ ಸಹ ಗುಂಡು ಹಾರಿಸಿ ಸಾವನ್ನಪ್ಪಿದ್ದಾನೆ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಬಸ್ತಾರ್ ರೇಂಜ್) ಪಿ.ಸುಂದರ್ ರಾಜ್ ಮಹಿತಿ ನೀಡಿದ್ದಾರೆ.
ಐಟಿಬಿಪಿ ಕಾನ್ಸ್ಟೇಬಲ್ ಮಸುದುಲ್ ರಹ್ಮಾನ್ ಸಹೋದ್ಯೋಗಿಗಳಿಗೆ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಇದರಲ್ಲಿ ಐವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಘಟನೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆತನಿಗೆ ರಜೆ ನೀಡಿಲ್ಲದ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸುದುಲ್ ರಹ್ಮಾನ್ನನ್ನು ಹೊರತುಪಡಿಸಿ ಸಾವನ್ನಪ್ಪಿದ ಎಲ್ಲರನ್ನೂ ಹೆಡ್ ಕಾನ್ಸ್ಟೇಬಲ್ಗಳಾದ ಮಹೇಂದ್ರ ಸಿಂಗ್, ದಲಿಜಿತ್ ಸಿಂಗ್, ಕಾನ್ಸ್ಟೇಬಲ್ಗಳಾದ ಸುರ್ಜಿತ್ ಸರ್ಕಾರ್, ಬಿಸ್ವರೂಪ್ ಮ್ಯಾಹ್ತೊ ಹಾಗೂ ನಿಜೀಶ್ ಎಂದು ಗುರುತಿಸಲಾಗಿದೆ.
ಕಾನ್ಸ್ಟೇಬಲ್ಗಳಾದ ಎಸ್.ಬಿ.ಉಲ್ಲಾಸ್ ಹಾಗೂ ಸೀತಾರಾಮ್ ದೂನ್ ಗಾಯಾಳುಗಳಾಗಿದ್ದಾರೆ. ಗುಂಡಿನ ಚಕಮಕಿ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಭೇಟಿ ನೀಡಿದ್ದಾರೆ ಎಂದು ಸುಂದರ್ ರಾಜ್ ತಿಳಿಸಿದ್ದಾರೆ.