ಬೆಂಗಳೂರು : ಹೆಚ್ಎಂಟಿ ಜಾಗವನ್ನು (HMT Land) ಅರಣ್ಯ ಭೂಮಿ (Forest Land) ಎಂದು ಪರಿಗಣಿಸಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಎಂಟಿಗೆ ಸೇರಿದ ಸುಮಾರು 590 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದ ಸುಮಾರು 290 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಅರಣ್ಯ ಇಲಾಖೆಯ ಜಾಗ ಎಂದು ವಶಪಡಿಸಿಕೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ನನ್ನ ಮೇಲಿನ ದ್ವೇಷಕ್ಕೆ ಹೀಗೆ ಮಾಡುವುದು ಸರಿಯಲ್ಲ ಅಂತ ಕಿಡಿಕಾರಿದರು.
ಹೆಚ್ಎಂಟಿಗೆ ಈ ಜಮೀನನ್ನು ಸರ್ಕಾರ ಪುಕ್ಕಟ್ಟೆಯಾಗಿ ಕೊಟ್ಟಿಲ್ಲ. ಇದಕ್ಕೆ ಹಣ ಪಡೆದಿದೆ. ಇದಲ್ಲದೆ ಅರಣ್ಯ ಇಲಾಖೆ ಕೂಡಾ ಹಿಂದೆ ಜಮೀನು ಖರೀದಿಗೆ ಒಪ್ಪಿಗೆ ಕೊಟ್ಟಿತ್ತು. ಈಗ ಯಾಕೆ ಏಕಾಏಕಿಯಾಗಿ ಖಾಲಿ ಜಾಗ ವಶಪಡಿಸಿಕೊಳ್ಳಲು ಮುಂದಾಗಿದ್ದೀರಿ? ಯಾರಿಗೆ ಹಂಚಲು ಈ ಆದೇಶ ಮಾಡಿದ್ದೀರಾ ಅಂತ ಈಶ್ವರ್ ಖಂಡ್ರೆಗೆ ಪ್ರಶ್ನೆ ಮಾಡಿದರು.
1963 ರಲ್ಲಿ ಖರೀದಿ ವೇಳೆ ಆದ ಎಲ್ಲಾ ದಾಖಲಾತಿಗಳು ಹೆಚ್ಎಂಟಿ ಬಳಿ ಇವೆ. ಎಚ್ಎಂಟಿ, ಇಸ್ರೋದವರು NOC ಕೇಳಿದ್ರೆ ಕೊಡುತ್ತಿಲ್ಲ. ಆದರೆ ಖಾಸಗಿ ಸಂಸ್ಥೆ ಪ್ರೆಸ್ಟೀಜ್ ಕಂಪನಿ ಕೇಳಿದ ಕೂಡಲೇ ಎನ್ಒಸಿ ಕೊಡುತ್ತಾರೆ. ಇದರಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುವವರ ಕೈವಾಡ ಇದೆಯಾ ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿಕಾರಿದರು.
ಕುಮಾರಸ್ವಾಮಿ ಮೇಲೆ ಇರುವ ದ್ವೇಷಕ್ಕೆ ರಾಜ್ಯವನ್ನು ಈಶ್ವರ್ ಖಂಡ್ರೆ ಹಾಳು ಮಾಡಿಕೊಳ್ಳೋದು ಬೇಡ. ನನಗೆ ಲಾಟರಿ ಸಿಸ್ಟಮ್ ನಲ್ಲಿ ದೇವರು ಅಧಿಕಾರ ಕೊಟ್ಟಿದ್ದಾರೆ. ಇದರಲ್ಲಿ ನಾಲ್ಕು ಒಳ್ಳೆ ಕೆಲಸ ಮಾಡಬೇಕು ಅಂತ ಇದ್ದೇನೆ. ಇದರಲ್ಲಿ ರಾಜಕೀಯ ಮಾಡಬೇಡಿ. ಹೆಚ್ಎಂಟಿ ಜಾಗ ಧರ್ಮಕ್ಕೆ ಕೊಟ್ಟಿಲ್ಲ. ಈಶ್ವರ್ ಖಂಡ್ರೆ ಎಲ್ಲಾ ದಾಖಲಾತಿ ತರಿಸಿಕೊಂಡು ಓದಬೇಕು ಅಂತ ಕಿಡಿಕಾರಿದರು. ಇದನ್ನೂ ಓದಿ: Tungabhadra Dam| ಗೇಟ್ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಲಿ: ಹೆಚ್ಡಿಕೆ ಆಗ್ರಹ
ಹೆಚ್ಎಂಟಿ ಸೇರಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆ, ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ಇದಕ್ಕೆ ನೀವು ರಾಜಕೀಯ ಮಾಡುವುದು ಬೇಡ ಅಂತ ಕಿಡಿಕಾರಿದರು. ಯಾವುದೇ ಕಾರಣಕ್ಕೂ ಹೆಚ್ಎಂಟಿ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಅಂತ ಈಶ್ವರ್ ಖಂಡ್ರೆಗೆ ಸವಾಲ್ ಹಾಕಿದರು.