ಮೈಸೂರು: ಹುಣಸೂರಿನಲ್ಲಿ ಈ ಬಾರಿ ನಡೆಯುತ್ತಿರೋ ಉಪ ಚುನಾವಣೆ ಸೇರಿ ಇದುವರೆಗೂ ನಾಲ್ಕು ಉಪ ಚುನಾವಣೆಗಳು ನಡೆದಿವೆ. ಆಯ್ಕೆಯಾದವರ ಸಾವಿನಿಂದಾದ ಉಪ ಚುನಾವಣೆಗಳು ಇವಲ್ಲ. ಆದರೆ ಇವು ಗೆದ್ದವರ ಅಧಿಕಾರದ ಅತಿ ಆಸೆಯಿಂದ ನಡೆದ ಚುನಾವಣೆಗಳು. ಈ ಬಾರಿಯೂ ಒಂದರ್ಥದಲ್ಲಿ ಅದೇ ಆಗುತ್ತಿದೆ.
ಮೈಸೂರಿನ ಹುಣಸೂರು ಕ್ಷೇತ್ರ ಉಪಚುನಾವಣೆಯಿಂದಲೇ ಫೇಮಸ್ ಆಗುತ್ತಿದೆ. ವಿಧಾನಸಭೆಗೆ ಗೆದ್ದವರು ಅವಧಿ ಪೂರೈಸದೇ ಸಂಸದರಾಗಿದ್ದು, ಚುನಾವಣೆಗೆ ನಿಲ್ಲದೆ ಸಿಎಂ ಸ್ಥಾನಕ್ಕೆ ಏರಿದವರಿಗೆ ಸ್ಥಾನ ಕಲ್ಪಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಇಂತಹ ಕಾರಣದಿಂದ ಹುಣಸೂರಿನಲ್ಲಿ ಉಪ ಚುನಾವಣೆಗಳು ನಡೆದು ಹೋಗಿವೆ. ಈಗ ನಡೆಯುತ್ತಿರುವ ಉಪ ಚುನಾವಣೆಯೂ ಕೂಡ ಇದರ ಮುಂದುವರಿದ ಭಾಗವಾಗಿದೆ.
ಉಪಚುನಾವಣೆ ಇತಿಹಾಸ:
1972 ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆ ನಡೆಯಿತು. ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ. ದೇವರಾಜ ಅರಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ದೇವರಾಜ ಅರಸ್ ಮುಖ್ಯಮಂತ್ರಿ ಆಗ್ತಾರೆ. ಆಗ ಈ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದ ಕರಿಯಪ್ಪಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ದೇವರಾಜ ಅರಸ್ ಇಲ್ಲಿಂದ್ದ ಸ್ಪರ್ಧಿಸಿ ಗೆಲ್ಲುತ್ತಾರೆ. 1989 ರಲ್ಲಿ ಹುಣಸೂರ ಕ್ಷೇತ್ರದಿಂದ ಗೆದ್ದಿದ್ದ ಡಿ. ದೇವರಾಜ ಅರಸ್ ಪುತ್ರಿ 1991 ರಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಆಗ ನಡೆದ ಉಪ ಚುನಾವಣೆಯಲ್ಲಿ ಎಸ್. ಚಿಕ್ಕಮಾದು ಗೆಲ್ಲುತ್ತಾರೆ.
1994 ರಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಂ ಸಿ.ಎಚ್. ವಿಜಯಶಂಕರ್ ಲೋಕಸಭೆಗೆ ಆಯ್ಕೆ ಆಗುತ್ತಾರೆ. ಆಗ 1998 ರಲ್ಲಿ ನಡೆದ ಮೂರನೇ ಉಪ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಆಯ್ಕೆಯಾಗುತ್ತಾರೆ. ಇದು ಜಿಟಿಡಿಗೆ ಸಿಕ್ಕ ರಾಜಕೀಯ ಜನ್ಮ. ಹೀಗಾಗಿ ಹುಣಸೂರು ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ, ಪುನರ್ ಜನ್ಮ ಸಿಕ್ಕಿದೆ.
ಒಟ್ಟಿನಲ್ಲಿ ಹುಣಸೂರಿನಲ್ಲಿ ನಡೆಯುವ ಉಪ ಚುನಾವಣೆಗಳು ಒಬ್ಬೊಬ್ಬ ನಾಯಕರಿಗೆ ರಾಜಕೀಯ ಜನ್ಮ ಕೊಟ್ಟಿರೋದು ಸ್ಪಷ್ಟ. ಈ ಬಾರಿಯೂ ಹುಣಸೂರಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಯಾರಿಗೆ ರಾಜಕೀಯ ಮರು ಜನ್ಮ ಸಿಗುತ್ತೋ, ಯಾರ ರಾಜಕೀಯ ಅಂತ್ಯವಾಗುತ್ತೋ ಕಾದು ನೋಡಬೇಕಿದೆ.