ಹಾವೇರಿ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಮುಂಬೈಗೆ ಹೋಗಿ ತೆಗೆದುಕೊಂಡು ಬಂದಿರುವ ನೋಟು ತಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಶಿಷ್ಟವಾಗಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ್ ಪರ ಬೃಹತ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅನರ್ಹ ಶಾಸಕ ಬಿ.ಸಿ.ಪಾಟೀಲ್ ಒಬ್ಬ ನಾಲಾಯಕ್. ಅನರ್ಹರು ಅಂದ್ರೆ ನಾಲಾಯಕ್. ಅದಕ್ಕೆ ಅವರನ್ನು ಸ್ಪೀಕರ್ ಅನರ್ಹರರನ್ನಾಗಿ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿರಲಿಲ್ಲ. ಅವರು ಮತ ಪಡೆದ ನಂತರ ಜನರ ಅಭಿಪ್ರಾಯ ಕೇಳದೆ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್ ಅವರು ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ದುಡ್ಡು ತಗೊಂಡು ಕಾಂಗ್ರೆಸ್ಗೆ ಹೋಗಿರಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ ನಂತರ ನಾನು ಅಹಿಂದ ಸಂಘಟನೆ ಕಟ್ಟಿದೆ. ಅದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಬಿ.ಸಿ.ಪಾಟೀಲ್ ಅವರು ನನ್ನ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕುವುದಾದರೆ ಹಾಕಲಿ ನೋಡೋಣ. ಆಮೇಲೆ ಅವರೇ ಸಿಲುಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನ ಲೇವಡಿ ಮಾಡುವ ಮುನ್ನ ಬಿಜೆಪಿ ಕಾರ್ಯಕರ್ತರಂತೆ ಮೋದಿ ಮೋದಿ ಮೋದಿ ಅಂತ ಕೂಗಿ ವ್ಯಂಗ್ಯವಾಡಿದರು. ಮೋದಿಯವರ ಅಚ್ಛೇ ದಿನ್ 6 ವರ್ಷವಾದರೂ ಬಂದಿಲ್ಲ. ಮುಂದೆನೂ ಬರುವುದಿಲ್ಲ ಎಂದು ಕಟುಕಿದರು.