ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

Public TV
2 Min Read
KALABURAGI DARGA

– ಮಧ್ಯಾಹ್ನದವರೆಗೆ ಇತ್ತು ನಮಾಜ್‍ಗೆ ಅವಕಾಶ

ಕಲಬುರಗಿ: ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ (Ladle Mashak Dargah Aland) ಮುಸ್ಲಿಮರ ಪ್ರಾರ್ಥನೆಯ ಬಳಿಕ ಇದೀಗ ಶಿವಲಿಂಗ ಪೂಜೆಯನ್ನು ನೆರವೇರಿಸಲಾಗಿದೆ.

ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ನಿಮಿತ್ತ ಪೂಜೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನಲೆ ಇಂದು ಸಂಜೆ ಆಂದೋಲಾ ಶ್ರೀಗಳ ನೇತೃತ್ವದಲ್ಲಿ 15 ಮಂದಿ ಹಿಂದೂಗಳು ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ರುದ್ರಾಭಿಷೇಕ, ಗಣೇಶ ಪೂಜೆ, ಗಂಗಾ ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹೀಗೆ ಸುಮಾರು 1 ಗಂಟೆಗಳ ಕಾಲ ಶಿವಲಿಂಗಕ್ಕೆ ಪೂಜೆ ನೆರವೇರಿದೆ.

KALABURAGI DARGA 1

ಪೂಜೆ ಬಳಿಕ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಪ್ರತಿಕ್ರಿಯಿಸಿ, ನಾವು ಸತತ ಮೂರು ವರ್ಷದಿಂದ ಸಹ ರಾಘವ ಚೈತನ್ಯ ಪೂಜೆ ಮಾಡಿದ್ದೇವೆ. ದುರಂತ ಅಂದ್ರೆ ನಮ್ಮ ಧರ್ಮದ ಶಿವಲಿಂಗ ಪೂಜೆಗೆ ನ್ಯಾಯಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ನ್ಯಾಯಾಲಯಕ್ಕೆ ನಾನು ಅಭಿನದಂನೆ ಸಲ್ಲಿಸುತ್ತೇನೆ. ನಮ್ಮ ಹೋರಾಟ ಈಗ ನಿರಂತರ ಆಗಿರುತ್ತದೆ. ಕೆಲ ಜಿಹಾದಿ ಮನಸ್ಥಿತಿ ಇರುವ ಹಿನ್ನೆಲೆ ಇಷ್ಟು ಬಂದೋಬಸ್ತ್ ಮಾಡಬೇಕಾಗುತ್ತದೆ. ರಾಘವ ಚೈತನ್ಯರ ಇತಿಹಾಸ ತೆಗೆದು ನ್ಯಾಯಾಲಯದಲ್ಲಿ ಸಲ್ಲಿಸಿ ದೇವಾಲಯ ನಿರ್ಮಾಣ ಮಾಡಲು ಅನುಮತಿಗೆ ಹೋರಾಟ ನಡೆಸುತ್ತೇವೆ ಎಂದರು. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

ಇತ್ತ ಮುಸ್ಲಿಮರಿಗೂ ಸಹ 12.30 ರಿಂದ 3.30ರವರೆಗೆ ಪ್ರಾರ್ಥನೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ದರ್ಗಾದ ಸುತ್ತಲೂ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 12 ಮಂದಿ ಮುಸ್ಲಿಮರು ಲಾಡ್ಲೆ ಮಶಾಕ್ ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಆಗಿದ್ದಾರೆ. ಪ್ರಾರ್ಥನೆ ಬಳಿಕ ದರ್ಗಾ ಕಮಿಟಿಯ ಅಧ್ಯಕ್ಷ ಮೋಯಿಜ್ ಅನ್ಸರಿ, ಮೊಹಮದ್ ಅಫಜಲ್ ಅನ್ಸಾರಿ ಪ್ರತಿಕ್ರಿಯಿಸಿ, ನಮಗೆ ಹಾಗೂ ಹಿಂದೂಗಳಿಗೆ 15 ಜನರಂತೆ ಪ್ರಾರ್ಥನೆ ಹಾಗೂ ಪೂಜೆ ಕೋರ್ಟ್ ಆದೇಶ ನೀಡಿತ್ತು. ಅದರಂತೆ ನಾವು ಇಂದು 12 ಮಂದಿ ಪ್ರಾರ್ಥನೆ ಮಾಡಿ ವಾಪಸ್ ಬಂದಿದ್ದೇವೆ. ನಾವು ಆಳಂದನಲ್ಲಿ ಹಿಂದೂ-ಮುಸ್ಲಿಮರು ಎಲ್ಲರೂ ಅಣ್ಣ-ತಮ್ಮರ ಹಾಗೆ ಇದ್ದೇವೆ. ಆದರೆ ಕೆಲವರ ರಾಜಕೀಯದಿಂದ ಗಲಾಟೆ ಆಗಿ ಇವಾಗ ಪೊಲೀಸ್ ಭದ್ರತೆ ನೀಡಬೇಕಾಗಿದೆ ಎಂದರು.

KALABURAGI DARGA 2

ನಾವು ಎಲ್ಲರು ಒಂದಾಗೆ ಇದ್ದೇವೆ. ಮತ್ತೆ ಒಟ್ಟಿಗೆ ಇರುತ್ತೇವೆ. ಆದರೆ ಇವಾಗ ಚುನಾವಣೆ ಬರ್ತಿದೆ, ಹಾಗಾಗಿ ಇಲ್ಲದೊಂದು ಸಮಸ್ಯೆ ಕ್ರಿಯೇಟ್ ಮಾಡ್ತಾರೆ. ಆದರೆ ಆಳಂದನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

Share This Article