– ಟೂರಿಸ್ಟ್ ವೀಸಾದಲ್ಲಿ ಬಂದವರಿಂದ ಪ್ರಚಾರ ಭಾಷಣ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿನ ಈದ್ ಮಿಲಾದ್ (Eid Milad) ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮದಲ್ಲಿ ಟೂರಿಸ್ಟ್ ವೀಸಾ ಪಡೆದು ಬಂದವರಿಂದ ಧರ್ಮ ಪ್ರಚಾರಕ್ಕೆ ಮುಂದಾಗಿರೋದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಅಂತ ಸಚಿವ ಜಮೀರ್ (Zameer Ahmed Khan) ಸ್ಪಷ್ಟನೆ ಕೊಟ್ಟಿದ್ದಾರೆ.
ಹೌದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ʻಮಿಲದುನ್ನಬಿʼ ಕಾನ್ಫರೆನ್ಸ್ ಹೆಸರಿನಲ್ಲಿ ಆಯೋಜಿಸಿರೋ ಈದ್ ಮಿಲಾದ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಹಿನ್ನೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದೇಶದಿಂದ ಬಂದ ಧರ್ಮಗುರುಗಳಿಂದ ಪ್ರಚಾರ ನಡೆಸೋದು ಅಗತ್ಯ ಇತ್ತೇ ಅನ್ನೋ ಪ್ರಶ್ನೆ ಎದ್ದಿದೆ.
ನಿಯಮ ಏನ್ ಹೇಳುತ್ತೆ?
* ಟೂರಿಸ್ಟ್ ವೀಸಾ ಪಡೆದು ಧರ್ಮ ಪ್ರಚಾರ ಮಾಡುವಂತಿಲ್ಲ.
* ಕಾರ್ಯಕ್ರಮದಲ್ಲಿ ಮಾತ್ರ ಭಾಗಿ ಆಗಬಹುದು.
* ಧರ್ಮಪ್ರಚಾರಕರು ಭಾಷಣ ಮಾಡುವಂತಿಲ್ಲ.
ಹಿಂದೂ ಸಂಘಟನೆಗಳಿಂದ ವಿರೋಧ
ಸೆಪ್ಟೆಂಬರ್ 5ರಂದು ನಡೆಯುತ್ತಿರೋ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಅಂತ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
“ ಭಾರತೀಯ ವೀಸಾ ನಿಯಮಗಳು ಹಾಗೂ ಫಾರಿನರ್ಸ್ ಆಕ್ಟ್ ಅನ್ವಯ ಭಾರತಕ್ಕೆ ಧರ್ಮಭೋಧನೆಗೆ ಧರ್ಮ ಪ್ರಚಾರಕ್ಕೆ ಅಡ್ಡ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವೀಸಾ ಪಡೆದರೂ ಭಾಗವಹಿಸುವಂತಿಲ್ಲ. ಈಗ ನಿಜಾಮುದ್ದೀನ್ ಜಮಾತ್ ಘಟನೆಯ ಬಳಿಕ ಬೆಂಗಳೂರು ನಗರದಲ್ಲಿ ಬೆಂಗಳೂರು ಪೊಲೀಸರು 19 ವಿದೇಶಿಯರನ್ನು ಬಂಧಿಸಿದ್ದಾರೆ. ದುರಂತವೆಂದರೆ ಇವರೆಲ್ಲರೂ ಟೂರಿಸ್ಟ್ ವೀಸಾ ಪಡೆದ ಭಾರತದಲ್ಲಿ ಧರ್ಮ ಪ್ರಚಾರಕ್ಕೆ ಬಂದಿದ್ದರು ಎನ್ನಲಾಗಿದೆ. ಇವರ ಕಾರ್ಯಕ್ರಮಗಳು ಹಾಗು ಓಡಾಟಗಳು ಗುಪ್ತವಾಗಿರುವುದರಿಂದ ಇವರು ರಾಷ್ಟ್ರದ ಆಂತರಿಕ ಭದ್ರತೆಗೆ ಮಾರಕವಾಗಿದ್ದಾರೆ. ಆಲ್ಲದೇ ಬಾಂಗ್ಲಾದೇಶ ಹಾಗೂ ಇತರೆ ರಾಷ್ಟ್ರಗಳಿಂದ ಬಂದಿರುವ ಪ್ರಜೆಗಳು ವೀಸಾ ದುರ್ಬಳಕೆ ಮಾಡುತ್ತಿದ್ದಾರೆ. ಕೆಲವರ ವೀಸಾ ಅವಧಿ ಮುಗಿದು ಹೋಗಿದೆ. ವೀಸಾ ನಿಯಮ ಕೇಂದ್ರದ ವಿಷಯವಾಗಿದ್ದರೂ, ರಾಜ್ಯದ ಆಂತರಿಕ ಭದ್ರತೆ ಹಾಗೂ ಐಕ್ಯತ ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ವೀಸಾ ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಂಡು ಅಂತಹವರನ್ನು ಗಡಿಪಾರು ಮಾಡಬೇಕಾಗಿ ಕೋರುತ್ತೇವೆ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ತೀವ್ರ ಟೀಕೆ ಬಳಿಕ ಎಚ್ಚೆತ್ತ ಗೃಹ ಸಚಿವರು
ಇನ್ನು, ತೀವ್ರ ಟೀಕೆ ಬಳಿಕ ಗೃಹ ಸಚಿವ ಪರಮೇಶ್ವರ್ ಎಚ್ಚೆತ್ತುಕೊಂಡಿದ್ಧಾರೆ. ಹಿಂದೂ ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರ ಭಾಷಣಕ್ಕೆ ಅವಕಾಶ ನೀಡಬಾರದು ಅಂತ ಸೂಚಿಸಿದ್ದಾರೆ. ವಿದೇಶಿಗರು ಬಂದು ಧಾರ್ಮಿಕ ಪ್ರಚಾರ ಮಾಡೋದಕ್ಕೆ ಅವಕಾಶ ಇಲ್ಲ. ಇದನ್ನ ನಿಯಂತ್ರಣ ಮಾಡಬೇಕು ಅಂತ ಆಯೋಜಕರಿಗೆ ಪರಂ ತಿಳಿಸಿದ್ಧಾರೆ. ಅಲ್ಲಿ ಏನಾದ್ರು ಉಲ್ಲಂಘನೆ ಮಾಡಿದ್ರೆ ನಿಗಾ ಇಡುತ್ತೇವೆ ಅಂತ ಪರಮೇಶ್ವರ್ ತಿಳಿಸಿದ್ದಾರೆ.