ಚಿತ್ರದುರ್ಗ: ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವಕನಿಗೆ, ಮತ್ತೋರ್ವ ಯುವಕ ಚಾಕು ಇರಿದು ಎಸ್ಕೇಪ್ ಆಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಆಲೂರು ಗ್ರಾಮದ ಯುವಕ ಸಮಿವುಲ್ಲಾ ಶನಿವಾರ ಸಂಜೆ ವಾಯುವಿಹಾರಕ್ಕೆಂದು ಧಾವಿಸಿ, ರಸ್ತೆಯಲ್ಲಿ ನಿಂತಿದ್ದಾಗ, ನೂತನ್ ಗುರಾಯಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಈ ರೀತಿ ಯಾಕೆ ಗುರಾಯಿಸುತ್ತೀಯಾ ಎಂದು ಸಮಿವುಲ್ಲಾ ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿ, ಸಮಿವುಲ್ಲಾ, ನೂತನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ನೂತನ್ ಸಮಿವುಲ್ಲಾನ ಎದೆ ಮತ್ತು ಹಣೆಯ ಭಾಗಕ್ಕೆ ನಾಲ್ಕೈದು ಬಾರಿ
ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ
ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಸಮಿವುಲ್ಲಾ ಗಂಭೀರ ಗಾಯಗೊಂಡಿದ್ದು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ತೆರಳಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದು, ಹಿಂದೂ, ಮುಸ್ಲಿಂ ಎನ್ನುವ ದ್ವೇಷದಿಂದ ಘಟನೆ ನಡೆದಿರಬಹುದು ಎಂದು ಲೇಪನ ಸಹ ಶುರುವಾಗಿದೆ. ಆದರೆ ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಸಮಿವುಲ್ಲಾ ಹೇಳಿಕೆ ಬಳಿಕವಷ್ಟೇ ಸತ್ಯ ಬಯಲಾಗಬೇಕಿದೆ. ಹೀಗಾಗಿ ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಆನಂದ್ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ – ರಸ್ತೆಯ ಮೇಲೆ ಹರಿಯುತ್ತಿದೆ ನೀರು
ಸದ್ಯ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ. ಈ ಪ್ರಕರಣ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.