ಹುಬ್ಬಳ್ಳಿ: ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ (ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪನೆ ಮಾಡುವ ಮುಸ್ಲಿಂ ದೇವರು) ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂರು ಏಕತೆಯನ್ನು ಸಾರಿದ್ದಾರೆ.
ಬಮ್ಮಾಪುರ ಏಣಿಯಲ್ಲಿ ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಘ್ನೇಶ್ವರ ಉತ್ಸವ ಸಮಿತಿ ಹಾಗೂ ಸೈಯದ್ ಸಾದಾತ್ ಜಮಾತ ವತಿಯಿಂದ ಆಚರಣೆ ಮಾಡುತ್ತಿದ್ದಾರೆ.
ಈ ಹಿಂದೆ 36 ವರ್ಷಗಳ ಹಿಂದೆ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಏಕಕಾಲದಲ್ಲಿ ಬಂದಾಗ, ಇದೇ ರೀತಿಯಲ್ಲಿ ಹಬ್ಬ ಆಚರಣೆ ಮಾಡಲಾಗಿತ್ತು. ಆದಾದ ನಂತರ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಏಕ ಕಾಲದಲ್ಲಿ ಬಂದಿರೋದರಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿಘ್ನೇಶ್ವರ ಉತ್ಸವ ಸಮಿತಿಯವರು ಹೇಳುತ್ತಾರೆ.
ಅಂದ ಹಾಗೆ ಮುಂಜಾನೆ ಹಾಗೂ ಸಂಜೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ಗಣೇಶನನ್ನು ನೋಡಲು ಬಂದವರು ಪಾಂಚಾ ದೇವರ ದರ್ಶನ ಪಡೆಯುತ್ತಾರೆ ಹಾಗೇ ಪಾಂಚಾ ದೇವರ ದರ್ಶನಕ್ಕೆ ಬಂದವರು ಗಣೇಶ ದರ್ಶನ ಪಡೆಯುತ್ತಾರೆ. ಇನ್ನು ಎರಡು ಹಬ್ಬಗಳು ಏಕಕಾಲದಲ್ಲಿ ಬಂದಿರುವುದು ಎರಡು ಸಮುದಾಯದ ಜನರ ಸಂಭ್ರಮ ಇಮ್ಮಡಿಗೊಳಿಸಿದೆ.
ಇತ್ತೀಚೆಗೆ ಸಾಂಸ್ಕೃತಿಕ ನಗರದಲ್ಲೂ ಕೂಡ ಎರಡು ಕಡೆಗಳಲ್ಲಿ ಮಾದರಿಯುತವಾಗಿ ಗೌರಿ ಹಾಗೂ ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಗಣೇಶ ಹಬ್ಬವನ್ನು ಆಚರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv