ಶಿಮ್ಲಾ: ಖಾಸಗಿ ವಾಹನದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (EVM) ಸಾಗಿಸಿರುವುದಾಗಿ ಆರೋಪಿಸಿ, ಶನಿವಾರ ರಾತ್ರಿ ಶಿಮ್ಲಾ (Shimla) ಜಿಲ್ಲೆಯ ರಾಂಪುರ (Rampur) ಪ್ರದೇಶದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರ ಗುಂಪೊಂದು ಮತಗಟ್ಟೆಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೇ ತಕ್ಷಣವೇ ಮತಗಟ್ಟೆ ಸದಸ್ಯರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಹಿಮಾಚಲ ಪ್ರದೇಶದಲ್ಲಿ (Himachal Pradesh) ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಇದರ ಬೆನ್ನಲ್ಲೇ ಇವಿಎಂ ಗಳನ್ನು ಅಧಿಕೃತವಲ್ಲದ ಖಾಸಗಿ ವಾಹನದಲ್ಲಿ ಸಾಗಿಸಲಾಗಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.
ಇವಿಎಂಗಳನ್ನು ಖಾಸಗಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದು, ನಾವು ವಾಹನವನ್ನು ಹಿಂಬಾಲಿಸಿದ್ದೇವೆ. ಈ ಬಗ್ಗೆ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ನಂದ್ ಲಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದ್ದಕ್ಕೆ ಟವರ್ ಹತ್ತಿ ಬೆದರಿಕೆ ಹಾಕಿದ ಆಪ್ ಮುಖಂಡ
ನಿಯಮದ ಪ್ರಕಾರ, ಮತದಾನ ಪ್ರಕ್ರಿಯೆ ಮುಗಿದ ಬಳಿಕ, ಇವಿಎಂಗಳನ್ನು ಸರ್ಕಾರಿ ವಾಹನಗಳಲ್ಲಿ ಎಣಿಕೆ ಕೇಂದ್ರಕ್ಕೆ ಸಾಗಿಸಬೇಕು. ಅಧಿಕಾರಿಗಳು ತಿಳಿಸಿರುವಂತೆ, 66-ರಾಮ್ಪುರ (SC) ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ಮತದಾನ ನಡೆದಿದೆ. ಬಳಿಕ ಇವಿಎಂಗಳನ್ನು ಖಾಸಗಿ ವಾಹನಗಳಲ್ಲಿ ಕೊಂಡೊಯ್ದಿರುವ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇವಿಎಂ ಯಂತ್ರಗಳನ್ನು ಖಾಸಗಿ ವಾಹನದಲ್ಲಿ ಸಾಗಿಸಿರುವ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೀಗ ಮತಗಟ್ಟೆ ಸದಸ್ಯರಾದ ಜಗತ್ ರಾಮ್, ಬೌರ್ ನರ್ವಾ, ಇಂದರ್ ಪಾಲ್, ಕುಮಾರಸೇನ್, ರಾಜೇಶ್ ಕುಮಾರ್, ಪ್ರದೀಪ್ ಕುಮಾರ್, ಗೋವರ್ಧನ್ ಸಿಂಗ್ ಹಾಗೂ ಇತರರನ್ನು ಜಿಲ್ಲಾ ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಇದನ್ನೂ ಓದಿ: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ