ಶಿಮ್ಲಾ: ಭಾರತದ ಪರ ಮಿಂಚಿನಂತ ರೈಡ್ ಗೆಲುವಿನ ದಡ ಸೇರಿಸುತ್ತಿದ್ದ ಕಬಡ್ಡಿ ಆಟಗಾರ ರೈಡರ್ ಅಜಯ್ ಠಾಕೂರ್ ಅವರು, ಕೊರೊನಾ ವೈರಸ್ ತಡಗಟ್ಟುವ ಸಲುವಾಗಿ ಖಾಕಿ ತೊಟ್ಟು ಹಿಮಾಚಲ ಪ್ರದೇಶದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ಇಡೀ ಭಾರತವನ್ನು 21 ದಿನಗಳ ಕಾಲ ಅಂದರೆ ಎಪ್ರಿಲ್ 14ರವರೆಗೆ ಲಾಕ್ಡೌನ್ ಮಾಡಿದ್ದಾರೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದೇಶಾದ್ಯಂತ ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಈಗ ಈ ಪಟ್ಟಿಗೆ ಸ್ಟಾರ್ ಕಬಡ್ಡಿ ಆಟಗಾರ ಅಜಯ್ ಠಾಕೂರ್ ಅವರು ಸೇರಿಕೊಂಡಿದ್ದು, ಹಿಮಾಚಲ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗಿ ಮನೆಯಲ್ಲೇ ಇರಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
https://www.instagram.com/p/B-KW8fgAvd9/
ಕೊರೊನಾ ವೈರಸ್ ಬಗ್ಗೆ ಜನರಿಗೆ ತಿಳಿಸಲು ಗಲ್ಲಿ ಗಲ್ಲಿ ಗಸ್ತು ತಿರುಗುತ್ತಿರುವ ಅಜಯ್ ಠಾಕೂರ್ ಅವರು, ತಮ್ಮ ಇನ್ಸ್ಟಾಗ್ರಾಮ್ನಲ್ಲೂ ಕೂಡ ಪೋಸ್ಟ್ ಹಾಕಿಕೊಂಡಿದ್ದಾರೆ. ನೀವು ಮನೆಯಲ್ಲೇ ಇರುವ ಮತ್ತು ಬೇರೆಯವರಿಗೆ ಮನೆಯಲ್ಲೇ ಇರಿ ಎಂದು ಹೇಳುವ ಸಮಯವಿದು. ರಾಜ್ಯದ ಅಡಳಿತವರ್ಗಕ್ಕೆ ನಿಮ್ಮ ಸಹಕಾರ ಮುಖ್ಯ. ನೀವು ಹೀಗೆ ಮಾಡಿದರೆ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ. ಮನೆಯಲ್ಲೇ ಇರಿ ಎಂದು ಬರೆದು ತಾವು ಗಸ್ತು ತಿರುಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
https://www.instagram.com/p/B-KSNe2A_ou/
ಅಜಯ್ ಠಾಕೂರ್ ಹಿಮಾಚಲ ಪ್ರದೇಶ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ ಮತ್ತು ಬಿಲಾಸ್ಪುರ ಪಟ್ಟಣದಲ್ಲಿ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಮಾತನಾಡಿರುವ ಅಜಯ್ ಠಾಕೂರ್ ಅವರು, ಜನರು ಈಗಲೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಳ್ಳಿಗಳಲ್ಲಿ ಅಡ್ಡಹಾದಿಯಲ್ಲಿ ಗುಂಪುಗಳಾಗಿ 10-15 ಜನರು ಪರಸ್ಪರ ಮಾತನಾಡುತ್ತಿರುವುದನ್ನು ನೋಡಿದ್ದೇನೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಕಬಡ್ಡಿಯಲ್ಲಿ ಭಾರತದ ಪರ ಸ್ಟಾರ್ ರೈಡರ್ ಆಗಿ ಮಿಂಚಿರುವ ಅಜಯ್ ಅವರು, ಹಿಮಾಚಲ ಪ್ರದೇಶದ ದಾಭೋಟ ಎಂಬ ಗ್ರಾಮದಲ್ಲಿ ಜನಿಸಿದ್ದಾರೆ. ಇವರು 2014 ರ ಏಷ್ಯನ್ ಗೇಮ್ ಮತ್ತು 2016ರ ಕಬಡ್ಡಿ ವಿಶ್ವ ಕಪ್ ನಲ್ಲಿ ಭಾರತ ಚಿನ್ನದ ಪದಕ ಗೆದ್ದಾಗ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು. ಅಜಯ್ ಠಾಕೂರ್ ಅವರಿಗೆ 2019ರಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
https://www.instagram.com/p/B5UF5h1gV-b/
ದೇಶಕ್ಕೆ ಮಹಾಮಾರಿಯಾಗಿ ಬಂದಿರುವ ಕೊರೊನಾ ವೈರಸ್ಗೆ ಇಲ್ಲಿಯವರೆಗೂ ಸುಮಾರು 13 ಜನ ಮೃತಪಟ್ಟಿದ್ದಾರೆ. ಜೊತೆಗೆ ಸುಮಾರು 649 ಜನ ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಹಿಮಾಚಲ ಪ್ರದೇಶದಲ್ಲೂ ಮೂರು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುತ್ತಿದೆ.