ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಅಲ್ಪ ಕಮ್ಮಿಯಾದರೂ ಅದರ ಪ್ರಭಾವ ಮಾತ್ರ ಈವರೆಗೂ ಬಾಧಿಸುತ್ತಲೇ ಇದೆ. ಮಳೆಗೆ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಗುಡ್ಡ ಕುಸಿತಗೊಂಡಿದೆ.
ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಮ್ ಮೇಲ್ಬಾಗದ ರಸ್ತೆಯ ಹಲವಡೆ ಬಿರುಕು ಕಾಣಿಸಿಕೊಂಡಿದೆ. ಕೊಡಸಳ್ಳಿ ಜಲಾಶಯಕ್ಕೆ 27,754 ಕ್ಯೂಸೆಕ್ ನೀರು ಒಳಹರಿವು ಇದ್ದು, 24,165 ಕ್ಯೂಸೆಕ್ ನೀರು ಹೊರಹರಿವು ಇದೆ. ಈ ಭಾಗದಲ್ಲಿ ಕಳೆದ 24 ಘಂಟೆಯಲ್ಲಿ 20 ಮಿ.ಮಿ. ಮಳೆಯಾಗಿದೆ. ಆದ್ದರಿಂದ ಹೆಚ್ಚಿನ ಮಳೆಯಾದಲ್ಲಿ ಜಲಾಶಯಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಜಲಾಶಯದ ಪ್ರದೇಶ ಅಪಾಯದಲ್ಲಿದ್ದು, ಗುಡ್ಡ ಕುಸಿತ ಹಿನ್ನಲೆಯಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್(ಕೆಪಿಸಿಎಲ್) ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ರಸ್ತೆ ಸಂಚಾರ ಸ್ಥಗಿತಗೊಳಿಸಿದೆ.