ಬೆಳಗಾವಿ: ನಮ್ಮ ದೇಶ ಸಂವಿಧಾನದ ಮೇಲೆ ನಿಂತಿದೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ ಶಾಲಾ-ಕಾಲೇಜು ಆವರಣಗಳಲ್ಲಿ ಹಿಜಬ್ ಹಾಗೂ ಕೇಸರಿ ಧರಿಸದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಹಿಜಬ್ ವಿಚಾರ ಕುರಿತು ಗೋಕಾಕ ಮತಕ್ಷೇತ್ರದ ಮುಖಂಡರುಗಳ ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಹಿಜಾಬ್ ವಿಚಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಕದಡುವ ಕೆಲಸಗಳಾಗುತ್ತಿದೆ. ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಿ ಶಾಲೆ, ಕಾಲೇಜು ಆವರಣಗಳಲ್ಲಿ ಯಾವುದೇ ಧರ್ಮದ ಉಡುಪುಗಳನ್ನು ಹಾಕದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.
ಬೆಂಗಳೂರಿನ ಕಾಲೇಜಿನಲ್ಲಿ ಯುವತಿಯೋರ್ವಳು ಅಲ್ಲಾಹು ಅಕ್ಬರ್ ಎಂದು ಭಾವೋದ್ವೇಗವಾಗಿ ಹೇಳಿದ್ದಾಳೆ. ಆದರೆ, ಶಾಂತಿ ಸುವ್ಯಸ್ಥೆ ಹಾಳು ಮಾಡಲು ಅವಳಿಗೆ ಬಹುಮಾನ ಘೋಷಿಸಿದ್ದಾರೆ. ಇಂತಹ ಘಟನೆಗಳು ನಡೆಯಬಾರದಿತ್ತು. ಹಿಂದೂಗಳು, ಹಿಂದೂಗಳಿಗೂ ಬಹುಮಾನ ಘೋಷಣೆ ಮಾಡಿದರೆ ಹೇಗೆ? ಹೀಗಾಗಿ ನಾವೆಲ್ಲರೂ ಸಹೋದರತ್ವದಲ್ಲಿ ಸಹಬಾಳ್ವೆ ನಡೆಸಬೇಕು. ಸೋಮವಾರದಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಹೀಗಾಗಿ ನಾವೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಶಾಂತಿ ಸೌಹಾರ್ದಯುತವಾಗಿ ನಾವೆಲ್ಲರೂ ನೆಲೆಸಿದ್ದೆವೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಹಾಗೂ ಡಿವೈಎಸ್ಪಿ ಮನೋಜಕುಮಾರ್, ಸಿಪಿಐಗಳಾದ ಗೋಪಾಲ್ ರಾಠೋಡ್, ಶ್ರೀಶೈಲ್ ಬ್ಯಾಕೂಡ, ಪಿಎಸ್ಐಗಳಾದ ನಾಗರಾಜ ಖಿಲಾರೆ, ಕೆ ವಾಲಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕುತ್ಬುದ್ದಿನ್ ಭಾಗವಹಿಸಿದ್ದರು.