ಧಾರವಾಡ: ಶಾಲೆಗಳಿಗೆ ಕೇಸರಿ ಶಾಲು ಅಥವಾ ಹಿಜಬ್ ಹಾಕಿಕೊಂಡು ಬರುವುದು ಸರಿಯಲ್ಲ. ಇದರಿಂದ ಶಾಲೆಗಳಲ್ಲಿ ಧರ್ಮದ ಸಮಸ್ಯೆ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ ರಾಷ್ಟ್ರ ಧ್ವಜ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎರಡು ನೂರು ವರ್ಷಗಳ ನಂತರ ಕೇಸರಿ ಧ್ವಜ ಬರಹುದು ಎಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ನನ್ನ ಪ್ರಕಾರ ನಮ್ಮ ರಾಷ್ಟ್ರ ಧ್ವಜ ಎರಡು ನೂರು ವರ್ಷದ ನಂತರ ಒಮ್ಮತದಿಂದ ಒಪ್ಪಿದ್ದೇವೆ. 75 ವರ್ಷದಿಂದ ತ್ರಿವರ್ಣ ಧ್ವಜದ ಜೊತೆ ನಮ್ಮ ಸಂಬಂಧ ಇದೆ. ಅದು ಗೌರವದ ಪ್ರತೀಕ, ಅದೇ ಇರುತ್ತದೆ. ಇದನ್ನೇ ಇಟ್ಟುಕೊಂಡು ವಿಧಾನ ಸಭೆ ಹಾಗೂ ಪರಿಷತ್ ಕಲಾಪ ಹಾಳು ಮಾಡುವಂತದ್ದು ಸರಿ ಅಲ್ಲ ಎಂದರು. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ
ಕಾಂಗ್ರೆಸ್ಗೆ ಏನಾಗಿದೆ ಅಂದರೆ ನೆಪ ಸಿಕ್ಕಿದೆ. ನನಗೆ ಖಚಿತ ಮಾಹಿತಿ ಇದೆ. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ನಲ್ಲೇ ಎರಡು ಬಣ ಆಗಿದೆ. ಹಿಜಬ್ ಪರ ನಾವು ತೀರ್ಮಾನ ತೆಗೆದುಕೊಂಡರೆ ನಷ್ಟ ಹಾಗೂ ವಿರುದ್ಧ ತೀರ್ಮಾನ ತೆಗೆದುಕೊಂಡರೆ ಮುಸ್ಲಿಂ ಮತ ಹೋಗುತ್ತವೆ ಎಂಬ ಚಿಂತೆ ಅವರಿಗೆ ಇದೆ. ಈ ಕಾರಣದಿಂದ ಈ ವಿಷಯ ಇಟ್ಟುಕೊಂಡು ಅಗತ್ಯಕ್ಕಿಂತ ಹೆಚ್ಚು ವಿವಾದ ಮಾಡಿ ಕಲಾಪ ಹಾಳು ಮಾಡುತಿದ್ದಾರೆ. ಜನರ ದುಡ್ಡನ್ನು ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೆನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್
ನೀವು ಚರ್ಚೆಗೆ ಬನ್ನಿ, ನಿಮಗೆ ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಈಶ್ವರಪ್ಪನ ಹೇಳಿಕೆ ನೆಪವಾಗಿ ಇಟ್ಟುಕೊಂಡಿದ್ದೀರಾ. ಇದು ಜನರಿಗೆ ಮಾಡುವ ದ್ರೋಹ. ಕೇಸರಿ ಶಾಲು ಅಥವಾ ಹಿಜಬ್ ಹಾಕಿಕೊಂಡು ಬರುವುದು ಸರಿಯಲ್ಲ. ಇದರಿಂದ ಧರ್ಮದ ಸಮಸ್ಯೆ ಆರಂಭ ಆಗುತ್ತದೆ. ಶಾಲೆಗಳಲ್ಲಿ ಗ್ರೂಪ್ಗಳು ಬೆಳೆಯುತ್ತವೆ. ಇಂತಹ ಅತ್ಯಂತ ಘನಘೋರ ತಪ್ಪನ್ನು ದುರುದ್ದೇಶದಿಂದ ಮಾಡುತ್ತಿದ್ದಾರೆ ಎಂದರು.
ಕೆಲ ಪತ್ರಿಕೆಗಳಲ್ಲಿ ಕೂಡಾ ಇದು ವರದಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರೋಧಿ ಸಂಘಟನೆಗಳು ಯಾವ ರೀತಿ ಪ್ರಚಾರ ಮಾಡುತ್ತಿವೆ. ಟ್ವೀಟ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಅಲ್ಲಾಹೂ ಅಕ್ಬರ್ ಘೋಷಣೆ ಮಾಡಿದ್ದನ್ನು ವೈಭವಿಕರಿಸುತ್ತಿದ್ದಾರೆ. ಇದಕ್ಕೆಲ್ಲವೂ ಪ್ಲಾನ್ ಆಗಿ ದೇಶಕ್ಕೆ ಬದನಾಮ್ ಮಾಡಲು ಪ್ರಯತ್ನ ನಡೆದಿದೆ. ಇದಕ್ಕೆ ಕಾಂಗ್ರೆಸ್ ನವರು ಮೋದಿ ಅಥವಾ ಬೊಮ್ಮಾಯಿ ವಿರೋಧದ ಭರದಲ್ಲಿ ದೇಶವನ್ನು ವಿರೋಧ ಮಾಡಬಾರದು ಎಂದು ತಿಳಿಸಿದರು.