ಮೈಸೂರು: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲೆಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮೂರು ದಿನಗಳಕಾಲ ನಡೆಯುತ್ತಿರುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾಮಹೋತ್ಸವಕ್ಕೆ ಭೇಟಿ ನೀಡಿದ್ದ ಅವರು ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ
ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.
ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ
ಸ್ಪೀಕರ್ ಹೇಳಿಕೆಗೆ ವಿರೋಧ
ಸ್ಪೀಕರ್ ನಿನ್ನೆ ಆ ಕುರ್ಚಿಯಲ್ಲಿ ಕೂತು ನಮ್ಮನ್ನು ಆರ್ಎಸ್ಎಸ್ ಅಂದಿದ್ದು ತಪ್ಪು. ಸ್ಪೀಕರ್ ಆದ ಮೇಲೆ ಅವರು ಪಕ್ಷಾತೀತರಾಗಿ ಇರಬೇಕು. ಆದರೆ, ನಿನ್ನೆ ನಮ್ಮನ್ನು ಆರ್ಎಸ್ಎಸ್ ಅಂದಿದ್ದು ಸರಿಯಲ್ಲ. ನಾವು ಯಾವಾಗಲೂ ಆರ್ಎಸ್ಎಸ್ ಗೆ ವಿರೋಧ. ಏಕೆಂದರೆ ಅವರದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಸಮಾಜ ಒಡೆಯುವುದೇ ಅವರ ಅಜೆಂಡಾ. ಸಭಾಧ್ಯಕ್ಷರ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಜನರ ಒತ್ತಾಯಕ್ಕೆ ಕುಣಿದೆ
ಇದೇ ವೇಳೆ ವೀರನ ಕುಣಿತದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪ್ರತಿದಿನ ವಾಕ್ ಮಾಡುವ ಕಾರಣ ಫಿಟ್ ಆಗಿದ್ದೇನೆ. ಹಾಗಾಗಿ ನಿನ್ನೆ ೪೦ ನಿಮಿಷ ಕುಣಿದೆ. ನನಗೆ ಡಯಾಬಿಟಿಸ್ ಇದೆ. ಇದರಿಂದ ಸ್ವಲ್ಪ ಎನರ್ಜಿ ಕಡಮೆಯಾಗಿದೆ. ಬಹಳ ವರ್ಷಗಳ ನಂತರ ಕೆಲವು ಸ್ಟೆಪ್ಸ್, ಕೆಲ ಹಾಡು ಮರೆತಿದ್ದೇನೆ. ನಿನ್ನೆಯೂ ಕುಣಿಯಬಾರದು ಅಂದುಕೊಂಡಿದ್ದೆ, ಆದರೆ ಜನರ ಒತ್ತಾಯ, ತಮಟೆ ಸದ್ದು ನನ್ನನ್ನು ಕುಣಿಯುವಂತೆ ಮಾಡಿತು ಎಂದು ನಗೆ ಬೀರಿದ್ದಾರೆ.