ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರನ್ನು ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಶಾಸಕರು ಬಲಿಪಶು ಮಾಡಿದ್ದಾರೆ. ಹಿಜಬ್ ವಿವಾದ ಹುಟ್ಟಿದ್ದು ಬಿಜೆಪಿಯಿಂದಲ್ಲ ಕಾಂಗ್ರೆಸ್ನಿಂದ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಪ್ರಚೋದನಾತ್ಮಕ ಹೇಳಿಕೆಗಳಿಂದ ಹಿಜಬ್ ವಿವಾದ ಸೃಷ್ಟಿಯಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹತಾಶೆಯಿಂದ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹಿಜಬ್ ವಿವಾದವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ನವರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯವರೂ ತಲೆಯ ಮೇಲೆ ಬಟ್ಟೆ ಹಾಕ್ತಾರೆ ಅದನ್ನೇಕೆ ಪ್ರಶ್ನಿಸುತ್ತೀರಾ?: ಹಿಜಬ್ ಬೆಂಬಲಿಸಿದ ಸಿದ್ದು
ಹಿಜಬ್ ಕುರಿತಾಗಿ ಕಾಂಗ್ರೆಸ್ನ ಜಮೀರ್ ಅಹಮ್ಮದ್, ಯು.ಟಿ ಖಾದರ್ ಸೇರಿದಂತೆ ಕೆಲವರ ಹೇಳಿಕೆಗಳು ಪ್ರಚೋದನೆಗೆ ಎಡೆಮಾಡಿಕೊಟ್ಟಿತು. ಪ್ರಚೋದನಾತ್ಮಕ ಹೇಳಿಕೆಗಳಿಂದ ಹಿಜಬ್ ವಿವಾದ ಸೃಷ್ಟಿಯಾಗಿದೆ. ಮಹಿಳೆಯರು, ಸ್ವಾಮೀಜಿಗಳು ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ. ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ಪ್ರತೀಕ. ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಸಮಾಜದಲ್ಲಿ ಸಹಭಾಳ್ವೆ ಇಲ್ಲದಂತಾಗುತ್ತಿದೆ. ಸರ್ಕಾರ ಮತ್ತು ಕೋರ್ಟ್ ಸಮವಸ್ತ್ರ ಧರಿಸುವಂತೆ ಹೇಳಿತ್ತು. ಇದನ್ನು ದಿಕ್ಕರಿಸಿ ಹಿಜಬ್ ಧರಿಸಿದ್ದರು. ಶಿಕ್ಷಣದಲ್ಲಿ ಧರ್ಮವನ್ನು ಎಳೆದು ತರಬೇಡಿ. ನಮ್ಮ ಮಠಾಧೀಶರನ್ನು, ಮಹಿಳೆಯರನ್ನು ಹಿಜಬ್ ವಿವಾದಕ್ಕೆ ಎಳೆದು ತರಬೇಡಿ. ನಾವು ಸಾಮರಸ್ಯ ಮೂಡಿಸಲು ಮುಂದಾದರೆ ಕಾಂಗ್ರೆಸ್ ವಿವಾದವನ್ನು ಮತ್ತೆ ಎಳೆದು ತರುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ