ಉಡುಪಿ: ಜಿಲ್ಲೆಯಲ್ಲಿ ಆರಂಭಗೊಂಡ ಹಿಜಬ್ ಹೋರಾಟದ ಆಫ್ಟರ್ ಎಫೆಕ್ಟ್ ಒಂದೊಂದಾಗಿ ಹೊರ ಬರುತ್ತಿದೆ. ಉಡುಪಿಯಲ್ಲಿ ತೀರ್ಪು ವಿರೋಧಿಸಿ ಮುಸಲ್ಮಾನ ವ್ಯಾಪಾರಿಗಳು ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ವ್ಯಾಪಾರ ಬಹಿಷ್ಕಾರ ಅಭಿಯಾನ ಶುರುವಾಗಿದೆ.
ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿಗಳನ್ನು ನೀಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂರು ಮಾರಿಗುಡಿಗಳ ಆಡಳಿತ ಮಂಡಳಿಗೆ ಶುಕ್ರವಾರ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ
ಹಿಂದೂ ಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಹೊಸ ಮಾರಿಗುಡಿಯ ಮುಂಭಾಗದಲ್ಲಿ ಜಮಾಯಿಸಿ, ಯಾವುದೇ ಕಾರಣಕ್ಕೂ ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.
ಹಿಜಬ್ ತೀರ್ಪಿನ ನಂತರ ಮುಸಲ್ಮಾನ ವ್ಯಾಪಾರಿಗಳು ರಾಜ್ಯಾದ್ಯಂತ ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೆಲ ಹಿಂದೂಗಳ ಅಂಗಡಿಗಳನ್ನು ಕೂಡ ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ನಡೆಸಿದ್ದಾರೆ. ಜಾತ್ರೆ-ಉತ್ಸವಗಳಲ್ಲಿ ಮುಸಲ್ಮಾನ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ
ಅಭಿಯಾನಕ್ಕೆ ಪೂರಕವಾಗಿ ಸ್ಪಂದಿಸಿದ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿ, ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ. ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ. ನೂರಾರು ಅಂಗಡಿಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ಹಣ್ಣುಕಾಯಿ ಹೂವು ಮತ್ತು ದೇವಿಗೆ ಬಲಿ ಕೊಡುವ ಕುರಿ ಮತ್ತು ಕೋಳಿ ವ್ಯಾಪಾರ ಕಾಪುವಿನಲ್ಲಿ ಜೋರಾಗಿ ನಡೆಯುತ್ತದೆ. ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ. ಹಿಜಬ್ ವಿವಾದ, ತೀರ್ಪು ನಂತರ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮಂಡಳಿಯು ತಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹಿಂದೂಯೇತರಿಗೆ ಅಂಗಡಿ ಹಾಕಲು ಅವಕಾಶ ನೀಡುವುದಿಲ್ಲ ಎಂದಿದೆ.