ಕಲಬುರಗಿ: ಹಿಜಬ್ ತಂಟೆಗೆ ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇನೆಂದು ವಿವಾದಾತ್ಮಕ ಹೇಳಿಕೆ ನೀಡಿ ಅರೆಸ್ಟ್ ಆಗಿದ್ದ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಏನಿದು ಪ್ರಕರಣ:
ಫೇ. 8 ರಂದು ಆಯೋಜಿಸಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಮಾತನಾಡುತ್ತ ಮುಕ್ರಂ ಖಾನ್, ಹಿಜಬ್ ತಂಟೆಗೆ ಬಂದರೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಆಂದೋಲಾ ಸ್ವಾಮಿಯನ್ನು ತುಂಡು, ತುಂಡು ಮಾಡಿ ಕತ್ತರಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬಳಿಕ ಈ ಹೇಳಿಕೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಬಳಿಕ ಕಲಬುರಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹಿಜಬ್ ತಂಟೆಗೆ ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದಿದ್ದ ಮುಕ್ರಂ ಖಾನ್ ವಿರುದ್ಧ FIR
ಹಿಂದೂಪರ ಸಂಘಟನೆಗಳು ಠಾಣೆಯ ಬಳಿ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಆ ಬಳಿಕ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಚೋದನಕಾರಿ ಭಾಷಣ, ಕೋಮು ಸೌಹಾರ್ದತೆ ಕದುಡುವ ನಿಟ್ಟಿನಲ್ಲಿ ಹೇಳಿಕೆ ನೀಡಿದ ಹಿನ್ನೆಲೆ ಐಪಿಸಿ ಸೆಕ್ಷನ್ (153), (294) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಮುಕ್ರಂ ಖಾನ್ರನ್ನು ಹೈದರಾಬಾದ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು.
ಬಳಿಕ ಇದೀಗ ಮುಕ್ರಂ ಖಾನ್ಗೆ ಸೇಡಂ ಪಟ್ಟಣದ ಸಿವಿಲ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಮುಂದೆ ಇಂತಹ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್ ಹೇಳಿದ್ದೇನು?