ರಾಯಚೂರು: ಉಚ್ಛ ನ್ಯಾಯಾಲಯದಲ್ಲಿ ಹಿಜಾಬ್ ಅಂತಿಮ ತೀರ್ಪು ಹಿನ್ನೆಲೆ ಇಂದು ಬೆಳಗ್ಗೆ 6 ಗಂಟೆಯಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ. ವಿವಿಗಳ ಪರೀಕ್ಷೆ ಹೊರತುಪಡಿಸಿ ಉಳಿದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್ ಹೈಕೋರ್ಟ್ ತೀರ್ಪು
ರಾಯಚೂರು, ಲಿಂಗಸೂಗೂರು, ಸಿಂಧನೂರು ನಗರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮೆರವಣಿಗೆ, ಸಂಭ್ರಮಾಚರಣೆ ಮತ್ತು ಹೋರಾಟಗಳಿಗೆ ಎರಡು ದಿನಗಳ ಕಾಲ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?
200ಕ್ಕೂ ಹೆಚ್ಚು ಪೊಲೀಸರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಭದ್ರತೆ ಒದಗಿಸಲಾಗಿದೆ. ಸೂಕ್ಷ್ಮವಾಗಿ ಕಾಲೇಜುಗಳ ಬಳಿ 10 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತದ ತಡರಾತ್ರಿ ವೇಳೆ ರಜೆ ಘೋಷಣೆ ತೀರ್ಮಾನ ಮಾಡಿದ್ದರಿಂದ ಮಾಹಿತಿ ಕೊರತೆಯಿಂದಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದು ವಾಪಸ್ಸಾಗುತ್ತಿದ್ದಾರೆ.