ಉಡುಪಿ: ಪ್ರತಿಷ್ಠಿತ ಎಂಜಿಎಂ ಕಾಲೇಜು ಆಡಳಿತ ಮಂಡಳಿ ಮಂಗಳವಾರದಿಂದ ಹಿಜಬ್ ಧರಿಸಿ ಬರದಂತೆ ಸೂಚನೆ ನೀಡಿದ್ದು, ಇದಕ್ಕೆ ವಿದ್ಯಾರ್ಥಿನಿಯರು ಒಪ್ಪಿಗೆ ಸೂಚಿಸಿದ್ದಾರೆ. ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದರೆ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವಿವಾದಕ್ಕೆ ಉಡುಪಿಯ ಹಿಂದೂ ಜಾಗರಣಾ ವೇದಿಕೆ ಬೆಂಬಲ ನೀಡಿದೆ. ಕಾಲೇಜು ಆಡಳಿತ ಮನವಿ ಮೇರೆಗೆ ವಿದ್ಯಾರ್ಥಿಗಳು ಇಂದು ಕೇಸರಿ ಶಾಲು ಧರಿಸಿಲ್ಲ. ನಾಳೆ ಅವರು ಹಿಜಬ್ ಧರಿಸಿದ್ರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಾರೆ. ಅದರೊಂದಿಗೆ ಪಂಚೆ, ಶಾಲು, ರುದ್ರಾಕ್ಷಿ ಮಾಲೆ ಕೂಡಾ ಹಾಕಿಕೊಂಡು ಬರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬರುತ್ತಿರುವುದಕ್ಕೆ ಬಾಕಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ತಕ್ಷಣ ಸಭೆ ನಡೆಸಿ ವಿವಾದವನ್ನು ಸರಿಪಡಿಸುವ ಯತ್ನಕ್ಕೆ ಮುಂದಾಗಿದ್ದಾರೆ. ವಸ್ತ್ರ ಸಂಹಿತೆ ಬಗ್ಗೆ ಸರ್ಕಾರದ ಆದೇಶ ಕುರಿತು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್
ಇದೇ ಸಂದರ್ಭದಲ್ಲಿ ಕುಂದಾಪುರದ ವೆಂಕಟರಮಣ ಕಾಲೇಜಿನ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಮೆರವಣಿಗೆ ನಡೆಸಿದ್ದಾರೆ. ಕಾಲೇಜು ಮೈದಾನದ ಬಳಿ ಮೆರವಣಿಗೆ ಮಾಡುತ್ತಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಹಾಗೂ ಪೊಲೀಸರು ತಡೆದು ತರಗತಿಗೆ ತೆರಳುವಂತೆ ಹೇಳಿದ್ದಾರೆ.
ಕಾಲೇಜು ಮೈದಾನಕ್ಕೆ ಬುರ್ಖಾ, ಸ್ಕಾರ್ಫ್ ಬರಬಾರದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಪ್ರಾಂಶುಪಾಲರು ಅವರ ಮನವೊಲಿಸಿ ತರಗತಿಗೆ ಕಳುಹಿಸಿದ್ದಾರೆ.
ಉಡುಪಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲೂ ಹಿಜಬ್ ಬಗ್ಗೆ ವಿವಾದ ಭುಗಿಲೆದ್ದಿದೆ. ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಪ್ರವೇಶಿಸಲು ಅಡ್ಡಿಗೊಳಿಸಲಾಗಿದೆ. ಹಿಜಬ್ ವಿರುದ್ಧ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದರು. ಇದನ್ನೂ ಓದಿ: ವಿದ್ಯಾರ್ಥಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನವಲ್ಲ: ಬಿ.ಸಿ ನಾಗೇಶ್
ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ವಿದ್ಯಾರ್ಥಿಗಳಿಗೆ ಧ್ವನಿವರ್ಧಕಗಳ ಮೂಲಕ ಓದಿ ಹೇಳಿದ್ದಾರೆ. ಬಳಿಕ ಕೇಸರಿ ಶಾಲುಗಳನ್ನು ವಿದ್ಯಾರ್ಥಿಗಳು ತೆದು ತರಗತಿ ಪ್ರವೇಶಿಸಿದ್ದಾರೆ. ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳನ್ನು ತರಗತಿಗೆ ಪ್ರವೇಶಿಸಿದಂತೆ ತಡೆಯಲಾಗಿದೆ.