ಚಾಮರಾಜನಗರ: ರಾಜ್ಯದಲ್ಲಿ ಹಿಜಬ್ ವಿವಾದದಿಂದ ಅನಾಹುತಗಳಾದರೆ ಸಿಎಂ ಬೊಮ್ಮಾಯಿ ಅಂಡ್ ಟೀಂ ಹೊಣೆ ಹೊರಬೇಕಾಗುತ್ತದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ತಪ್ಪು ನಡೆಯಿಂದ ಹಿಜಬ್ ವಿವಾದ ಭುಗಿಲೆದ್ದಿದೆ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತಾಗಿ ಕುರಾನ್ನಲ್ಲಿ ಯಾವುದೇ ಉಲ್ಲೇಖ ಕಾಣುವುದಿಲ್ಲ : ಮೊಹಮ್ಮದ್ ಖಾನ್
ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಬಿಜೆಪಿ, ಆರ್ಎಸ್ಎಸ್, ಎಬಿವಿಪಿ ಮತ್ತಿತರ ಸಂಘ ಪರಿವಾರದ ಸಂಘಟನೆಯ ಪ್ರಚೋದನೆಯೇ ಇದಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷ ಇದರ ಹೊಣೆಹೊರಬೇಕು. ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಈ ವಿವಾದ ಸೃಷ್ಟಿಸಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಗಳಲ್ಲಿ ಹಿಜಬ್ ವಿವಾದ – ಹೈಕೋರ್ಟ್ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ
ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕರ ಸನ್ಮಾನ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೂ ಅದಕ್ಕೂ ಸಂಬಂಧವಿಲ್ಲ. ಪಕ್ಷದ ಶಾಸಕಾಂಗ ನಾಯಕರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸನ್ಮಾನ ಮಾಡಿಲ್ಲ, ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ ಕೆಲವರು ವೈಯಕ್ತಿಕ ಸನ್ಮಾನ ಮಾಡಿದ್ದಾರೆ. ಸನ್ಮಾನ ಮಾಡುವವರನ್ನು ನಾವು ತಡೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.