ಬೆಂಗಳೂರು: ಹಿಜಜ್ ವಿವಾದದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ಕೂಡ ನಡೆಸಿದ್ದು, ಮತ್ತೆ ನಾಳೆ 2:30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.
ಹಿಜಬ್ ವಿವಾದದ 5ನೇ ದಿನದ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಅರ್ಜಿದಾರರ ಪರವಾಗಿ ಕೆಲವೊಂದು ವಾದವನ್ನು ಆಲಿಸಿತು. ಆದರೆ ಎರಡು ಪಿಎಎಲ್ಗಳ ವಿಚಾರಣೆ ನಡೆಸುವಾಗ ಒಂದು ಅರ್ಜಿಯನ್ನು ವಜಾ ಮಾಡಿದೆ. ಸರಿಯಾದ ನಿಯಮಾನುಸಾರ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದು ವಜಾ ಮಾಡಿದ ತ್ರಿಸದಸ್ಯ ಪೀಠ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದೆ.
ಮತ್ತೊಂದು ಪಿಎಎಲ್ ಪರವಾಗಿ ವಾದ ಮಂಡಿಸಿದ ವಕೀಲ ವಿನೋದ್ ಕುಲಕರ್ಣಿ ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದರು. ಜೊತೆಗೆ ಇವತ್ತೆ ಮಧ್ಯಂತರ ಆದೇಶ ನೀಡುವಂತೆ ಮನವಿ ಮಾಡಿಕೊಂಡರು. ಇಷ್ಟೆಲ್ಲಾ ಪ್ರತಿವಾದದ ಬಳಿಕ ಸರ್ಕಾರದ ಪರವಾಗಿ ವಾದ ಮಂಡಿಸಲು ತ್ರಿಸದಸ್ಯ ಪೀಠ ಸೂಚನೆ ನೀಡಿತ್ತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್: ಡಾ.ಕೆ ಸುಧಾಕರ್
ಆದರೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ನಾಳೆ ವಾದ ಮಂಡನೆ ಮಾಡುವುದರ ಜೊತೆಗೆ ಮಧ್ಯಂತರ ಅರ್ಜಿಗೆ ಆಕ್ಷೇಪ ಸಲ್ಲಿಕೆ ಮಾಡುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಈ ಸಂದರ್ಭದಲ್ಲಿ ವಕೀಲರೊಬ್ಬರು ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಆಗ ತ್ರಿಸದಸ್ಯ ಪೀಠ ಸರ್ಕಾರ ಮತ್ತು ಅರ್ಜಿದಾರರು ಒಪ್ಪಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಅಭಿಪ್ರಾಯ ನೀಡಿತು. ಇದನ್ನೂ ಓದಿ: ನಿಮಗೆ ಗುಂಡಿ ಮುಚ್ಚೋದಕ್ಕೆ ಆಗದಿದ್ರೆ ಮಿಲಿಟರಿ ಕರೆಸ್ತೇನೆ – ಹೈಕೋರ್ಟ್ ಗರಂ