ಬೆಂಗಳೂರು: ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಮತದಾನ ಕೇಂದ್ರದಲ್ಲಿ ಗದ್ದಲ, ಗಲಾಟೆ ಉಂಟಾಗಿದೆ.
ಎಲೆಕ್ಷನ್ ನಿಲ್ಲಿಸಿ ಎಂದು ಜೆಡಿಎಸ್ ಮುಖಂಡ ಹೆಚ್ಡಿ ರೇವಣ್ಣ ಗಲಾಟೆ ಮಾಡಿದ್ದಾರೆ. ರಾಜ್ಯಸಭಾ ಚುನಾವಣಾಧಿಕಾರಿ ಮೂರ್ತಿ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರಿಗೆ ಎರಡು ಬಾರಿ ಮತದಾನ ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂಚನಸೂರ್ ಅವರು ಮೊದಲ ಬಾರಿ ಮತಪತ್ರ ತೆಗೆದುಕೊಂಡಾದ ತಪ್ಪು ತಪ್ಪಾಗಿ ನಮೂದಿಸಿದ್ದರು. ಹೀಗಾಗಿ ಎರಡನೇ ಬ್ಯಾಲೆಟ್ ಪೇಪರ್ ಕೊಟ್ಟಿದ್ದರಿಂದ ಗಲಾಟೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಖ್ ಹಾಗೂ ರಮೇಶ್ ಬಾಬು ಗಲಾಟೆ ಮಾಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ನೀವು ಪಾರ್ಟಿ ಸೇರಿಕೊಳ್ಳಿ ಎಂದು ರೇವಣ್ಣ ಗರಂ ಆಗಿದ್ದು, ನನಗೆ ಬೆದರಿಕೆ ಹಾಕಬೇಡಿ ಎಂದು ಮೂರ್ತಿ ಅವರು ಕೂಡ ವಾಗ್ವಾದ ನಡೆಸಿದ್ದಾರೆ.
ಚಿಂಚನಸೂರು ಬೆನ್ನಲ್ಲೇ ಕಾಗೋಡು ತಿಮ್ಮಪ್ಪ ಕೂಡ ಇದೇ ರೀತಿ ಎಡವಟ್ಟು ಮಾಡಿದ್ದು, ಬೇರೆ ಅಭ್ಯರ್ಥಿಯ ಗುರುತಿಗೆ ಸೀಲ್ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟ್ ಇದನ್ನ ಗಮನಿಸಿ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತಂದಿದ್ದು, ಮತ್ತೆ ಅವರಿಗೆ ಬೇರೆ ಬ್ಯಾಲೆಟ್ ಪೇಪರ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಿಲ್ಲಿಸಿ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.