ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಜೆಸಿಬಿ ಸದ್ದು ಜೋರಾಗಿತ್ತು. ಅನಧಿಕೃತವಾಗಿ ನಿರ್ಮಿಸಿದ್ದ ಹಕ್ಕಿಪಿಕ್ಕಿ ಕ್ಯಾಂಪಿನ ಗುಡಿಸಲುಗಳ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದರು. ಇದಕ್ಕೆ ಸ್ಥಳೀಯ ನಿವಾಸಿಗಳ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ತೆರವು ಕಾರ್ಯಾಚರಣೆ ವಿರೋಧಿಸಿ ನಿವಾಸಿಗಳು ಆತ್ಮಹತ್ಯೆಗೂ ಯತ್ನಿಸಿದರು. ಇದು ಯಾವುದಕ್ಕೂ ಜಗ್ಗದ ಅಧಿಕಾರಿಗಳು ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಸಿದರು.
ಶಿವಮೊಗ್ಗದ ಮಲ್ಲಿಗೆನಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ಹಕ್ಕಿಪಿಕ್ಕಿ ಕ್ಯಾಂಪ್ (Hakki Pikki Camp) ನವರು ಸುಮಾರು 8-10 ವರ್ಷಗಳಿಂದ ವಾಸವಾಗಿದ್ದಾರೆ. ಸರ್ವೆ ನಂಬರ್ 18 ಹಾಗೂ 19 ರಲ್ಲಿ ಸುಮಾರು 8.29 ಎಕರೆ ಪ್ರದೇಶ ತುಂಗಾ ಮೇಲ್ದಂಡೆ ಯೋಜನೆ ನೀರಾವರಿ ನಿಗಮಕ್ಕೆ ಸೇರಿದ್ದಾಗಿದೆ. ಈಗಾಗಿಯೇ ಅಧಿಕಾರಿಗಳು ಹಲವು ವರ್ಷಗಳಿಂದ ತೆರವು ಮಾಡುವಂತೆ ಸೂಚಿಸಿತ್ತು. ಆದರೂ ಇಲ್ಲಿನ ನಿವಾಸಿಗಳು ಮನೆಗಳ ತೆರವು ಮಾಡದೇ ಇಲ್ಲಿಯೇ ಸುಮಾರು 250-300 ಕುಟುಂಬಗಳು ವಾಸವಾಗಿವೆ.
ಅಧಿಕಾರಿಗಳ ನೋಟೀಸ್ ಗೆ ಇಲ್ಲಿನ ನಿವಾಸಿಗಳು ಖಾಲಿ ಮಾಡದಿದ್ದಾಗ ಇಲಾಖೆ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ ಅನಧಿಕೃತವಾಗಿ ನಿರ್ಮಿಸಿರುವ ಗುಡಿಸಲುಗಳ ತೆರವಿಗೆ ಹೈಕೋರ್ಟ್ (HighCourt) ಆದೇಶಿಸಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಇಂದು ತೆರವು ಮಾಡಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ತೆರಳಿದ್ದರು. ಆದರೆ ಸ್ಥಳೀಯ ನಿವಾಸಿಗಳು ಮನೆ ತೆರವು ಮಾಡಲು ವಿರೋಧ ವ್ಯಕ್ತಪಡಿಸಿದರು. ಜೆಸಿಬಿ (JCB) ಗೆ ಅಡ್ಡಲಾಗಿ ಮಲಗಿಕೊಂಡರು, ವಿಷದ ಬಾಟಲಿ ಹಿಡಿದು, ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದರು. ಆದರೆ ಅಧಿಕಾರಿಗಳು ಸ್ಥಳೀಯರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ಬಳ್ಳಾರಿಯಲ್ಲಿ ರಾಹುಲ್ ಮತದಾನ
ಸದ್ಯ ಈ ಜಾಗದಲ್ಲಿ 250-300 ಕುಟುಂಬಗಳಿದ್ದು, ನೀರಾವರಿ ಇಲಾಖೆಗೆ ಸೇರಿದ ಸ್ಥಳದಲ್ಲಿ 129 ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. 129 ಮನೆಗಳ ತೆರವಿಗೆ ಅಧಿಕಾರಿಗಳು ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ. ಇಂದು ಖಾಲಿಯಿದ್ದ 8 ಮನೆಗಳ ತೆರವು ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಇನ್ನು 15 ದಿನದೊಳಗೆ ಮನೆಗಳ ತೆರವು ಮಾಡಬೇಕು. ಇಲ್ಲದಿದ್ದರೆ ಮತ್ತೆ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂಬ ಸೂಚನೆ ನೀಡುವ ಜೊತೆಗೆ 15 ದಿನಗಳ ಕಾಲ ಗಡುವು ನೀಡಿ ಸ್ಥಳದಿಂದ ತೆರಳಿದರು.
ಒಟ್ಟಿನಲ್ಲಿ ಸರ್ಕಾರದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡರೆ ಯಾವುದೇ ವಿರೋಧ ಎದುರಾದರೂ ಬಿಡುವುದಿಲ್ಲ ಎಂಬುದನ್ನು ಅಧಿಕಾರಿಗಳು ಇಂದು ತೋರಿಸಿದ್ದಾರೆ. ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ವಶಕ್ಕೆ ಪಡೆದ ಪೊಲೀಸರು, ಉಳಿದ ಮನೆಗಳ ತೆರವಿಗೆ 15 ದಿನಗಳ ಕಾಲ ಕಾಲಾವಕಾಶ ನೀಡಿದ್ದಾರೆ. ಇದನ್ನೂ ಓದಿ: BJPಯವರಿಗೆ ಮಾನ ಮುಚ್ಚಿಕೊಳ್ಳೋದೇ ಕಷ್ಟವಾಗಿದೆ – ದಿನೇಶ್ ಗುಂಡೂರಾವ್