ಮಾತೃತ್ವದ ರಜೆ ವೇಳೆ ಬೇರೆಯವರ ನೇಮಕ – ಹುದ್ದೆಯಲ್ಲಿ ಮುಂದುವರೆಯುವಂತೆ ಹೈಕೋರ್ಟ್ ತೀರ್ಪು

Public TV
1 Min Read
Kalaburagi Dharwad Benches of the High Court

ಧಾರವಾಡ: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಮಾತೃತ್ವ ರಜೆ ಬಳಿಕವೂ ಉದ್ಯೋಗದಲ್ಲಿ ಮುಂದುವರೆಸುವಂತೆ ಧಾರವಾಡ ಹೈಕೋರ್ಟ್ (High Court) ಪೀಠ ಮಹತ್ವದ ತೀರ್ಪು ನೀಡಿದೆ.

ವಿಜಯನಗರ (Vijayanagar) ಜಿಲ್ಲೆಯ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಚಾಂದ್ಬಿ ಬಳಿಗಾರ ಎಂಬುವವರು 2014ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿಂದ 2023ರ ವರೆಗೂ ಚಾಂದ್ಬಿ ಅವರು ಕೆಲಸ ಮಾಡಿದ್ದರು. ನಂತರ ಮಾತೃತ್ವ ರಜೆಗಾಗಿ ಅರ್ಜಿ ಕೊಟ್ಟು ತೆರಳಿದ್ದರು. ಇದಾದ ಬಳಿಕ ಅವರು ಮಾತೃತ್ವ ರಜೆ ಮುಗಿಸಿ ಮರಳಿ ಬಂದ ನಂತರ ಅವರ ಸ್ಥಾನಕ್ಕೆ ಬೇರೆಯವರನ್ನು ಇಲಾಖೆ ನೇಮಕ ಮಾಡಿಕೊಂಡಿತ್ತು.

ಈ ವಿಷಯವನ್ನು ವಿಜಯನಗರ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿ ಚಾಂದ್ಬಿ ಅವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ ಮಹಿಳಿಗೆ ಮಾತೃತ್ವ ರಜೆ ನೀಡಬೇಕು. ಅವರನ್ನು ಮರಳಿ ಉದ್ಯೋಗದಲ್ಲಿ ಮುಂದುವರಿಸಬೇಕು ಎಂದು ಮಹತ್ವದ ಆದೇಶ ನೀಡಿದೆ. ಅಲ್ಲದೇ ಚಾಂದ್ಬಿಗೆ ಆಗಿರುವ ನಷ್ಟವನ್ನೂ ಭರಿಸುವಂತೆ ಸೂಚನೆ ನೀಡಿದೆ.

Share This Article