ಕಾರವಾರ/ ಮಂಗಳೂರು: ಮಂಗಳವಾರದಂದು ಪಾಕ್ ಉಗ್ರರ ಕ್ಯಾಂಪ್ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಪರಿಣಾಮ ಪಾಕ್ ಕಡೆಯಿಂದಲೂ ಸಂಭಾವ್ಯ ದಾಳಿ ಆಗುವ ಸಾಧ್ಯತೆ ಹಿನ್ನೆಲೆ ರಾಜ್ಯದ ಕರಾವಳಿ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದ ದಾಳಿಗೆ ಕಂಗೆಟ್ಟಿರುವ ಪಾಕ್ ಭಾರತದ ಮೇಲೆ ಪ್ರತಿದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯದ ಕರಾವಳಿಯಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ. ಅದರಲ್ಲೂ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾದಳದಲ್ಲಿ ಸ್ವೇಟ್-1 ಹೈ ಅಲರ್ಟ್ ಮುಂದುವರಿದಿದೆ.
ರಜೆಯಲ್ಲಿದ್ದ ನೌಕಾಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ರವಾನಿಸಲಾಗಿದೆ. ಕದಂಬ ನೌಕಾನೆಲೆ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕಾರವಾರ ಕದಂಬ ನೌಕಾದಳದಿಂದ ಭಾರತ ಗಡಿಗೆ ಭದ್ರತೆಗೆ ನೌಕೆಗಳು ಈಗಾಗಲೇ ತೆರಳಿವೆ.
ನೇವಿ ಹಾಗೂ ಕೋಸ್ಟ್ ಗಾರ್ಡ್ ನಿಂದ ಕರಾವಳಿ ಸಮುದ್ರದಲ್ಲಿ ಪೆಟ್ರೋಲಿಂಗ್ ಮಾಡಲಾಗುತ್ತಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಅಲರ್ಟ್ ಆಗಿರಲು ಸೂಚನೆಯನ್ನು ನೀಡಲಾಗಿದೆ. ಹಾಗೆಯೇ ಹೆಚ್ಚುವರಿ ಚೆಕ್ಪೊಸ್ಟ್ ಪೊಲೀಸರಿಂದ ಜಿಲ್ಲೆಯೊಳಗೆ ಬರುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಆಳ ಸಮುದ್ರದಲ್ಲಿ ಸುರಕ್ಷತೆಗಾಗಿ ಡಾಮಿನರ್ ಹೆಲಿಕಾಪ್ಟರ್ ಬಳಕೆ ಮಾಡಲಾಗಿದ್ದು, ಸಮುದ್ರದಲ್ಲಿ ಸಂಚರಿಸುವ ಬೋಟ್ಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv