ಚಿಕ್ಕಬಳ್ಳಾಪುರ: ಸ್ವಾಮೀಜಿ ಮಾತು ನಂಬಿ ಶನಿಮಹಾತ್ಮನಿಗೆ ಗುಲಾಬಿ ಹಾರದ ಜೊತೆ ಮಾಂಸದ ಹಾರ ತಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ದೊಡ್ಡಬಳ್ಳಾಪುರದ (Doddaballapura) ಚಿಕ್ಕ ಮಧುರೆಯಲ್ಲಿ (Chikka Madhure) ನಡೆದಿದೆ.
ಹೊಸಕೋಟೆ (Hoskote) ತಾಲೂಕಿನ ಕಂಬಳಿಪುರ ಗ್ರಾಮದ ಮುನಿರಾಜು ಪೊಲೀಸರ ಅತಿಥಿಯಾದ ವ್ಯಕ್ತಿ. ಈತನ ಜೊತೆ ಆಟೋ ಚಾಲಕ ಸೋಮಶೇಖರ್ ಎಂಬಾತನನ್ನ ಸಹ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮದ ಪುರಾತನ ಪ್ರಸಿದ್ದ ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನಕ್ಕೆ (Shanimahathma Temple) ಎರಡು ತಿಂಗಳ ಹಿಂದೆ ಸಹ ಇಬ್ಬರು ಯುವಕರು ಬೃಹತ್ ಗಾತ್ರದ ಹೂವಿನ ಹಾರಗಳನ್ನ (Flower garland) ಕೊಟ್ಟು ಹೋಗಿದ್ದರು. ಅರ್ಚಕರು ಹಾರ ತೆಗೆದು ನೋಡಿದಾಗ ಗುಲಾಬಿ ಹೂವಿನ ಹಾರದ ಮಧ್ಯೆ ಮಾಂಸದ ತುಂಡುಗಳು ಪತ್ತೆಯಾಗಿತ್ತು. ನಂತರ ದೇವಾಲಯವನ್ನ ಶುಚಿಗೊಳಿಸಲಾಗಿತ್ತು. ಇದನ್ನೂ ಓದಿ: ಉದ್ಘಾಟನೆ ದಿನವೇ ಎಕ್ಸ್ಪ್ರೆಸ್ವೇಯಲ್ಲಿ ಅಪಘಾತ
ಘಟನೆ ನಂತರ ದೇವಾಲಯದ ಆಡಳಿತ ಮಂಡಳಿ, ಥರ್ಮಾಕೋಲ್ ಇರುವ ಹಾರವನ್ನು ನಿಷೇಧ ಮಾಡಿತ್ತು. ಸಿಬ್ಬಂದಿ ನೇಮಕ ಮಾಡಿಕೊಂಡು ಭಕ್ತರು ತರುವ ವಸ್ತುಗಳನ್ನು ಪರಿಶೀಲನೆ ನಡೆಸಲು ಆರಂಭಿಸಿತ್ತು.
ಯುವಕರು ಈ ಹಿಂದೆ ಮಾಡಿದ ಹಾಗೆ ಅದೇ ರೀತಿ ಹೂವಿನ ಹಾರ ತಂದಿದ್ದು, ದೇವಾಲಯದ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದ ಸಿಬ್ಬಂದಿ ದೊಡ್ಡಬೆಳವಂಗಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿ ಮುನಿರಾಜು ವಿಚಾರಣೆ ವೇಳೆ, ತನ್ನ ವಾಹನ ಅಪಘಾತಕ್ಕೀಡಾಗಿತ್ತು. ಈ ಬಗ್ಗೆ ಸ್ವಾಮೀಜಿಯೊಬ್ಬ ನಿನಗೆ ಶನಿ ದೋಷವಿದೆ. ಹೀಗಾಗಿ ನೀನು ದೇವರಿಗೆ ಮಾಂಸದ ಸಮೇತ ಹೂವಿನ ಹಾರ ಸಮರ್ಪಣೆ ಮಾಡಬೇಕು ಎಂದಿದ್ದಾಗಿ ತಿಳಿಸಿದ್ದಾನೆ.
ಈ ಹಿಂದೆ ನಡೆದಿದ್ದ ಪ್ರಕರಣದಲ್ಲಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಒದಗಿಸಲಾಗಿತ್ತು. ಸದ್ಯ ಸ್ವಾಮೀಜಿಯ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಗುಡಿಸಲಿಗೆ ಬೆಂಕಿ ಐವರು ಸಜೀವ ದಹನ