ಮಂಗಳೂರು: ಅತ್ತ ದುಡಿಯಲೂ ಆಗದೆ, ತಿನ್ನೋಕೂ ಗತಿಯಿಲ್ಲದವರುವ ಕೊನೆಗೆ ಭಿಕ್ಷೆಗೆ ಇಳಿಯುತ್ತಾರೆ. ಆದರೆ ನಗರದಲ್ಲೊಂದು ಯುವತಿಯರ ತಂಡ ಹೈ- ಫೈ ಆಗಿದ್ದುಕೊಂಡು ಭಿಕ್ಷಾಟನೆಗಿಳಿದಿದೆ.
ನಗರದ ಹಲವು ಕಡೆ ಯುವತಿಯರು ಹೈ-ಫೈ ರೀತಿಯಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಂಡು ಹಿಂದಿ ಮಾತನಾಡುತ್ತಾ ಭಿಕ್ಷೆ ಬೇಡುತ್ತಿದ್ದಾರೆ. ಸಿಗ್ನಲ್ ಗಳ ಬಳಿ ವಾಹನ ಸವಾರರಿಗೆ ನಾವು ರಾಜಸ್ಥಾನದ ರಾಣಿಪುರ್ ಜಿಲ್ಲೆಯವರು, ಪ್ರವಾಹದಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಗತಿಯಿಲ್ಲದೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪ್ರವಾಹ ಪರಿಸ್ಥಿತಿಯ ಬಗ್ಗೆ ಬರೆದುಕೊಂಡಿರುವ ಪತ್ರವನ್ನು ಮುಂದಿಟ್ಟು ಭಿಕ್ಷೆ ಬೇಡುತ್ತಿದ್ದಾರೆ.
ಯುವತಿಯರನ್ನು ನೋಡಿದರೆ ಯಾವ ಉದ್ಯೋಗಿಗಳಿಗೂ ಕಮ್ಮಿಯಿಲ್ಲದಂತಿದ್ದು, ರಸ್ತೆಯಲ್ಲಿ ಬೈಕಿನಲ್ಲಿ ಬರುವ ಯುವಕರನ್ನು ಯಾಮಾರಿಸಿಕೊಂಡು ನೂರು, ಇನ್ನೂರು ರೂಪಾಯಿಗಳನ್ನು ಕೀಳುತ್ತಿದ್ದಾರೆ. ಇವರ ಈ ವರ್ತನೆಯನ್ನು ಗಮನಿಸಿದ ಕೆಲವು ಯುವಕರು ಆಕ್ಷೇಪಿಸಿ, ಕದ್ರಿ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದರು.
ಘಟನೆ ಕುರಿತು ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಈ ರೀತಿ ಇನ್ನೊಮ್ಮೆ ಮಾಡದ ಹಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಹಣಗಳಿಸಲು ಯುವತಿಯು ಹೈ-ಫೈ ಭಿಕ್ಷಾಟನೆಗಿಳಿದಿರುವುದು ವಿಪರ್ಯಾಸವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews