ಬೈರೂತ್: ನಗರದಲ್ಲಿ ಇಸ್ರೇಲ್ ನಡೆಸುತ್ತಿರುವ ವಾಯುದಾಳಿ ದಿನೇ ದಿನೇ ತೀವ್ರವಾಗುತ್ತಿದ್ದು, ಅತ್ತ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕರೆಲ್ಲ ಕಣ್ಮರೆಯಾಗುತ್ತಿದ್ದಾರೆ. ಶನಿವಾರ ಉತ್ತರ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೇ ನಸ್ರಲ್ಲಾನ ಸಂಭಾವ್ಯ ಉತ್ತರಾಧಿಕಾರಿಯೂ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಹಿಜ್ಬುಲ್ಲಾ ಕಮಾಂಡರ್ ನಬಿಲ್ ಕೌಕ್, ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು. ಇದೀಗ ಹಿಜ್ಬುಲ್ಲಾ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಹಮಾಸ್ ಟಾಪ್ ಕಮಾಂಡರ್ ಉಡೀಸ್:
ದಕ್ಷಿಣ ಲೆಬನಾನ್ ಬಳಿಕ ಹಿಜ್ಬುಲ್ಲಾ (Hezbollah) ಭಯೋತ್ಪಾದಕರ ಗುಂಪನ್ನು ಗುರಿಯಾಗಿಸಿ ಉತ್ತರ ಲೆಬನಾನ್ (North Lebanon) ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಟ್ರಿಪೋಲಿ ಶನಿವಾರ ಟ್ರಿಪೋಲಿ ನಗರದ ಮೇಲೆ ದಾಳಿ ನಡೆಸಿ, ಹಮಾಸ್ನ ಚೀಫ್ ಕಮಾಂಡರ್ ಹಾಗೂ ಆತನ ಕುಟುಂಬವನ್ನು ಹತ್ಯೆಗೈದಿದೆ. ಈ ಬೆನ್ನಲ್ಲೇ ಇಸ್ರೇಲ್ ಸೇನೆಯು ಇನ್ನಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ತಕ್ಷಣವೇ ಆ ಪ್ರದೇಶದ ನಿವಾಸಿಗಳು ಸ್ಥಳದಿಂದ ಎತ್ತಂಗಡಿ ಮಾಡುವಂತೆ ಎಚ್ಚರಿಸಿದೆ.
250 ಹಿಜ್ಬುಲ್ಲಾ ಭಯೋತ್ಪಾದಕರ ಹತ್ಯೆ:
ಶುಕ್ರವಾರವಷ್ಟೇ ಹಿಜ್ಬುಲ್ಲಾ ಭಯೋತ್ಪಾದಕರನ್ನು ಹತ್ಯೆಗೈದಿರುವ ಬಗ್ಗೆ ಇಸ್ರೇಲ್ ಮಾಹಿತಿ ಹಂಚಿಕೊಂಡಿತ್ತು. ಕಳೆದ ಒಂದು ವಾರದಲ್ಲಿ ಇಸ್ರೇಲ್ ಹಿಜ್ಬುಲ್ಲಾದ 2,000ಕ್ಕೂ ಹೆಚ್ಚು ಸೇನಾ ನೆಲೆಗಳ ಗುರಿಯಾಗಿಸಿ ದಾಳಿ ನಡೆಸಿದ್ದು, 250ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದೆ. ಇದರಲ್ಲಿ 5 ಬೆಟಾಲಿಯನ್ ಕಮಾಂಡರ್, 10 ಕಂಪನಿ ಕಮಾಂಡರ್ ಹಾಗೂ 6 ಪ್ಲಟೂನ್ ಕಮಾಂಡರ್ಗಳನ್ನ ಕೊಂದಿರುವುದಾಗಿ ಹೇಳಿಕೊಂಡಿತ್ತು.
ಇರಾನ್ ಸುಪ್ರೀಂ ಲೀಡರ್ ಯುದ್ಧಕ್ಕೆ ಕರೆ
ಟೆಗ್ರಾನ್ ನಗರದ ಕೇಂದ್ರ ಭಾಗದಲ್ಲಿರುವ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಮಾತನಾಡಿದ ಇರಾನ್ ಸರ್ವೋಚ್ಛ ನಾಯಕ ಹಾಗೂ ಧರ್ಮ ಗುರು ಅಯತೊಲ್ಲಾ ಅಲಿ ಖಮೇನಿ, ‘ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು. ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ ಎಂದು ಕರೆ ಕೊಟ್ಟಿದ್ದರು.
ಇಸ್ರೇಲ್ ಮೇಲಿನ ದಾಳಿಗೆ ಖಮೇನಿ ಸಮರ್ಥನೆ!
ಇಸ್ಲಾಮಿಕ್ ರಿಪಬ್ಲಿಕ್ ದೇಶವಾದ ಇರಾನ್ ಕೆವು ದಿನಗಳ ಹಿಂದೆ ಇಸ್ರೇಲ್ ಮೇಲೆ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗಳನ್ನು ‘ಕಾನೂನುಬದ್ದ’ ಎಂದು ಪ್ರತಿಪಾದಿಸಿದ ಖಮೇನಿ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನೂ ‘ನ್ಯಾಯಸಮ್ಮತ’ ಎಂದು ಪ್ರತಿಪಾದಿಸಿದ್ದರು.