ಬೆಂಗಳೂರು: ಶನಿವಾರ ಬೆಂಗಳೂರು ಮತ್ತು ಹೈದರಾಬ್ ನಡುವಿನ ಪಂದ್ಯದ ವೇಳೆ ಶಿಮ್ರೊನ್ ಹೆಟ್ಮೇಯರ್ ಹೊಡೆತಕ್ಕೆ ಗುರುಕೀರತ್ ಬ್ಯಾಟ್ ಮೇಲಕ್ಕೆ ಚಿಮ್ಮಿದ ಪ್ರಸಂಗ ನಡೆಯಿತು.
ಆರ್ಸಿಬಿ 20 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಬಳಿಕ ಹೆಟ್ಮೇಯರ್ ಮತ್ತು ಗುರುಕೀರತ್ ಕ್ರೀಸ್ನಲ್ಲಿ ನಿಧಾನವಾಗಿ ರನ್ ಪೇರಿಸುತ್ತಿದ್ದರು. ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು ಮಾಡಿದ ನಾಲ್ಕನೇ ಓವರ್ನ ನಾಲ್ಕನೇ ಎಸೆತವನ್ನು ಶಿಮ್ರೋನ್ ಹೆಟ್ಮರ್ ಬಲವಾಗಿ ಹೊಡೆದಿದ್ದಾರೆ.
ಬಾಲ್ ತನ್ನತ್ತ ಬರುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ ನಾನ್ ಸ್ಟ್ರೈಕರ್ ನಲ್ಲಿದ್ದ ಗುರುಕೀರತ್ ಅವರು ಬ್ಯಾಟ್ ಮೇಲಕ್ಕೆ ಎತ್ತಿ ತಪ್ಪಿಸಲು ಯತ್ನಿಸಿದರು. ಆದರೆ ಈ ಪ್ರಯತ್ನ ವಿಫಲವಾಗಿದ್ದು, ಬಾಲ್ ನೇರವಾಗಿ ಬ್ಯಾಟಿಗೆ ಬಡಿದಿದೆ. ಚೆಂಡು ಹೊಡೆದ ರಭಸಕ್ಕೆ ಅವರ ಬ್ಯಾಟ್ ಗಾಳಿಯಲ್ಲಿ ಮೇಲಕ್ಕೆ ಹಾರಿ ಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದಾರಬಾದ್ ತಂಡ ನಾಯಕ ಕೆ. ವಿಲಿಯಮ್ಸನ್ ಹೊಡೆದ 70 ರನ್ (43 ಎಸೆತ, 5 ಬೌಂಡರಿ, 4 ಸಿಕ್ಸರ್) ಸಹಾಯದಿಂದ 174 ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಇದನ್ನು ಬೆನ್ನಟಿದ ಬೆಂಗಳೂರು ತಂಡ ಆರಂಭಿಕ 3 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಹೆಟ್ಮೇಯರ್ 75 ರನ್ (47 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಗುರುಕೀರತ್ ಸಿಂಗ್ 65 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರು ನಾಲ್ಕನೇ ವಿಕೆಟ್ಗೆ 144 ರನ್ ಗಳ ಜೊತೆಯಾಟವಾಡಿದರು. ಈ ಮೂಲಕ ಬೆಂಗಳೂರು ತಂಡವನ್ನು 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸೂಪರ್ ಬ್ಯಾಟಿಂಗ್ ಮಾಡಿದ ಶಿಮ್ರೊನ್ ಹೆಟ್ಮರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
— Cricket Chamber (@cricketchamber) May 4, 2019
ಈ ಪಂದ್ಯದಲ್ಲಿ ಹೈದರಾಬಾದ್ ಗೆದ್ದಿದ್ದರೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಿತ್ತು. ಆದರೆ ಸೋತಿದ್ದರಿಂದ ಪ್ಲೇ ಆಫ್ ಪ್ರವೇಶದ ಕನಸು ಇಂದು ಕೋಲ್ಕತ್ತಾ ಮತ್ತು ಪಂಜಾಬ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ಈ ಪಂದ್ಯದಲ್ಲಿ 12 ಅಂಕಗಳಿಸಿರುವ ಕೋಲ್ಕತ್ತಾ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಪಂಜಾಬ್ ಗೆದ್ದರೆ ರನ್ ರೇಟ್ ಆಧಾರದಲ್ಲಿ ಹೈದರಾಬಾದ್ ಪ್ಲೇ ಆಫ್ ಪ್ರವೇಶಲಿದೆ.