ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು – ಸಂರಕ್ಷಿತ ಪ್ರದೇಶ ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ್ ಖಂಡ್ರೆ

Public TV
2 Min Read
Eshwara Khandre 1

ಬೆಂಗಳೂರು: 133 ಪ್ರಭೇದದ ಪಕ್ಷಿಗಳ ತಾಣ ಗ್ರೇಟರ್ ಹೆಸರಘಟ್ಟ (Hesaraghatta Grassland) ಈಗ ಸುರಕ್ಷಿತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಹೇಳಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅತ್ಯಾವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’  (Hesaraghatta Conservation Reserve) ಎಂದು ಘೋಷಿಸಿದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ನಮ್ಮ ಆದ್ಯತೆಯ ವಿಷಯವಾಗಿತ್ತು. ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Hesaraghatta grass land 2

ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು 5678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972ರ ಕಲಂ 36(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರಲಿದೆ. ಕಳೆದ ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಗುರುವಾರ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಎಂದು ತಿಳಿಸಿದ್ದಾರೆ.

ಈ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ. ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ (Bengaluru) ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯರಿಗೆ ತೊಡಕಿಲ್ಲ
‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಣೆ ಮಾಡಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಡಕಾಗುವುದಿಲ್ಲ. ಆದರೆ ಈ ಘೋಷಣೆ ಅತ್ಯಮೂಲ್ಯವಾದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪಕ್ಷಿ, ಪ್ರಾಣಿಗಳ ಕಳ್ಳಬೇಟೆಯನ್ನು ನಿಯಂತ್ರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article