ಬೆಂಗಳೂರು: ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸೋಕೆ ಮಲೇಷ್ಯಾ ಟ್ರಿಪ್ ಹೊರಟಿದ್ದ ಜೆಡಿಎಸ್ ಟ್ರಿಪ್ ಕ್ಯಾನ್ಸಲ್ ಮಾಡಿರುವುದು ಯಾಕೆ ಅನ್ನೋ ಕುತೂಹಲ ಎಲ್ಲರಿಗೂ ಮೂಡಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಜೆಡಿಎಸ್ ಅಂತರ್ಹಕಲಹದ ರಹಸ್ಯವನ್ನ ಪಬ್ಲಿಕ್ ಟಿವಿ ಬಿಚ್ಚಿಟ್ಟಿದೆ.
ಮಲೇಷ್ಯಾ ಪ್ರವಾಸಕ್ಕೆ ಕರೆದೊಯ್ಯಲು ಶಾಸಕರ ಪಾಸ್ ಪೋರ್ಟ್ ಕಲೆ ಹಾಕಲು ಮುಂದಾದ ಮಾಜಿ ಸಿಎಂ ಕುಮಾರಸ್ವಾಮಿಗೆ ಕೇವಲ 14 ಪಾಸ್ ಪೋರ್ಟ್ ಗಳಷ್ಟೆ ಸೇರಿವೆ. ಉಳಿದವರ ಪಾಸ್ ಪೋರ್ಟ್ ಕೇಳುವಷ್ಟರಲ್ಲೇ ದೇವೇಗೌಡರ ಬೀಗರು, ಮದ್ದೂರಿನ ಶಾಸಕರಾದ ಡಿ.ಸಿ ತಮ್ಮಣ್ಣ ಬಂಡಾಯದ ಮೊದಲ ಬಾವುಟ ಹಾರಿಸಿದ್ದಾರೆ. ನಾನು ಮಲೇಷ್ಯಾಕ್ಕೂ ಬರಲ್ಲ ಮುಂದೆ ಚುನಾವಣೆಗೂ ನಿಲ್ಲಲ್ಲ. ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ಎಂದು ಉಲ್ಟಾ ಹೊಡೆದಿದ್ದಾರೆ.
ಶಾಸಕರ ಅಸಮಾಧಾನ ಕಂಡು ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿಗೆ ಹೆಚ್ಡಿಕೆ ಶಾಸಕರ ಪಾಸ್ ಪೋರ್ಟ್ ಸಂಗ್ರಹಿಸಿ ಎಂದಿದ್ದಾರೆ. ಮಾಜಿ ಸಿಎಂ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಶಾಕ್ ಆಗುವಂತಹ ಪ್ರತಿಕ್ರಿಯೆ ನೀಡಿದ್ದಾರೆ. ನಾನೇ ಮಲೇಷ್ಯಾಕ್ಕೆ ಬರಲ್ಲ ನನಗೆ ರಾಜ್ಯಾಧ್ಯಕ್ಷ ಸ್ಥಾನವೂ ಬೇಡ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬೇಡ ನಾನೇ ನಿವೃತ್ತಿ ಘೋಷಿಸುತ್ತೇನೆ ಎಂದು ಕೈ ಎತ್ತಿದ್ದಾರೆ.
ಸ್ವತಃ ಬೀಗರು ಒಂದು ಕಡೆ, ಪಕ್ಷದ ರಾಜ್ಯಾಧ್ಯಕ್ಷರು ಇನ್ನೊಂದು ಕಡೆ ಬಂಡಾಯದ ಬಾವುಟ ಹಾರಿಸುತ್ತಿದ್ದಂತೆ ಉಳಿದ ಶಾಸಕರು ಹಾಗೂ ಪರಿಷತ್ ಸದಸ್ಯರು ಕೂಡ ಮಲೇಷ್ಯಾ ಪ್ರವಾಸ ಬೇಡ ಎಂದಿದ್ದಾರೆ. ಹೀಗೆ ಸ್ವತ: ಸಂಬಂಧಿಕರು ಹಾಗೂ ರಾಜ್ಯಾಧ್ಯಕ್ಷರ ಅಸಮಾಧಾನ ಕಂಡು ಮಾಜಿ ಸಿಎಂ ಕೂಡ ಶಾಕ್ ಆಗಿದ್ದಾರೆ.
ನಮ್ಮವರೇ ಬರಲು ಒಪ್ಪದ ಮೇಲೆ ಬೇರೆ ಶಾಸಕರನ್ನ ಎಷ್ಟು ಒತ್ತಾಯಿಸಿದರೂ ಪ್ರಯೋಜನ ಆಗಲ್ಲ. ಕೇವಲ ಬೆರಳೆಣಿಕೆ ಶಾಸಕರನ್ನ ಕರೆದೊಯ್ದು ಮತ್ತಷ್ಟು ಗೊಂದಲ ಮೂಡಿಸಿವುದು ಬೇಡ ಎಂದು ಮಲೇಷ್ಯಾ ಪ್ರವಾಸವನ್ನೇ ರದ್ದು ಮಾಡಿದ್ದಾರೆ ಎನ್ನಲಾಗಿದೆ.